ಮುಂಬೈ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಚಲನಚಿತ್ರ ಮತ್ತು ಕಿರುತೆರೆ ನಟಿ ಎಂ.ಎಸ್.ಕೇತಕಿ ಚಿತಾಲೆ(29) ಅವರು ಶರದ್ ಪವಾರ್ ಅವರನ್ನು ನಿಂದಿಸಿರುವ ಮರಾಠಿ ಭಾಷೆಯ ಪದ್ಯವನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆ ನಟಿ ವಿರುದ್ಧ ಉತ್ತರ ಮಹಾರಾಷ್ಟ್ರದ ಧುಲೆಯಲ್ಲಿ ಎನ್ಸಿಪಿ ಮುಖಂಡರೊಬ್ಬರು ದೂರನ್ನು ಕೊಟ್ಟಿದ್ದರು. ಅದಕ್ಕೆ ಚಿತಾಲೆ ಅವರನ್ನು ಪೊಲೀಸರು ಬಂಧಿಸಿದ್ದು, ಹಾಲಿಡೇ ಕೋರ್ಟ್(ರಜಾ ನ್ಯಾಯಾಲಯ) ಮುಂದೆ ಹಾಜರುಪಡಿಸಿದ್ದಾರೆ. ಪರಿಣಾಮ ಚಿತಾಲೆ ಅವರನ್ನು ನ್ಯಾಯಾಲಯ ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ
ಪವಾರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ಗಳನ್ನು ಶೇರ್ ಮಾಡಿದ ಆರೋಪದ ಮೇಲೆ ಎಂಎಸ್ ಚಿತಾಲೆ ಮತ್ತು 23 ವರ್ಷದ ಫಾರ್ಮಸಿ ವಿದ್ಯಾರ್ಥಿ ನಿಖಿಲ್ ಭಾಮ್ರೆ ಅವರನ್ನು ಶನಿವಾರ ಬಂಧಿಸಲಾಗಿದೆ. ಚಿತಾಲೆ ಅವರನ್ನು ಥಾಣೆ ಪೊಲೀಸರು ಬಂಧಿಸಿದರೆ, ಭಾಮ್ರೆ ಅವರನ್ನು ನಾಸಿಕ್ನಲ್ಲಿ ಬಂಧಿಸಲಾಯಿತು.
ಪದ್ಯ ರೂಪದಲ್ಲಿದ್ದ ಕೇತಕಿ ಚಿತಾಲೆ ಅವರು ಶೇರ್ ಮಾಡಿರುವ ಪೋಸ್ಟ್ ಬೇರೆಯವರು ಬರೆದಿದ್ದು, ಇದರಲ್ಲಿ ‘ನರಕ ಕಾಯುತ್ತಿದೆ’ ಮತ್ತು ‘ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ’ ಎಂಬ ಪದಗಳನ್ನು ಒಳಸಿದ್ದು, ಶರದ್ ಪವಾರ್ ಅವರನ್ನು ಉಲ್ಲೇಖಿಸಲಾಗಿತ್ತು.
ಚಿತಾಲೆ ವಿರುದ್ಧ ಐಪಿಸಿ ಸೆಕ್ಷನ್ 500(ಮಾನನಷ್ಟ), 501 (ಮಾನಹಾನಿಕರ ಎಂದು ತಿಳಿದಿರುವ ವಿಷಯವನ್ನು ಪ್ರಕಟಿಸುವುದು), 505 (2) (ಯಾವುದೇ ಹೇಳಿಕೆ, ವದಂತಿ ಅಥವಾ ವರದಿಯನ್ನು ಮಾಡುವುದು) ಮತ್ತು 153 ಎ(ಜನರಲ್ಲಿ ಅಶಾಂತಿ ಹರಡುವುದು) ಅಡಿ ದೂರು ದಾಖಲಾಗಿದೆ.
ಈ ಕುರಿತು ಶರದ್ ಪವಾರ್ ಅವರನ್ನು ಮಾಧ್ಯಮಗಳು ಪ್ರಶ್ನೆ ಕೇಳಿದ್ದು, ಚಿತಾಲೆ ಯಾರೆಂದು ನನಗೆ ತಿಳಿದಿಲ್ಲ. ಅವರು ನನ್ನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಏನೂ ಪೋಸ್ಟ್ ಮಾಡಿದ್ದಾರೆ ಎಂಬುದೇ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ
ಯಾರು ಈ ನಟಿ?
ಕೇತಕಿ ಚಿತಾಲೆ ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದು, ‘ತುಜಾ ಮಜಾ ಬ್ರೇಕಪ್’ ಸರಣಿಯ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ಚಿತಾಲೆ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕುಖ್ಯಾತರಾಗಿದ್ದಾರೆ.