ಮಂಗಳೂರು: ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya Ram Mandir) ರಾಮನ ವಿಗ್ರಹ ಪ್ರತಿಷ್ಠಾಪನೆಗೆ (Pran Prathistha Ceremony) ಪೂರ್ವಭಾವಿಯಾಗಿ ಮಂತ್ರಾಕ್ಷತೆ ವಿತರಣೆಗೆ ಸ್ವಯಂಸೇವಕರಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಮುಂಡೂರು (Mundur) ಎಂಬಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದವರನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್ ಸಿಗ್ನಲ್
ನಡೆದಿದ್ದೇನು..?: ಸಂತೋಷ್ ಅವರು ಮುಂಡೂರು ಗ್ರಾಮದಲ್ಲಿ ಮಂತ್ರಾಕ್ಷತೆ ಹಂಚುವ ಜವಾಬ್ದಾರಿ ಹೊತ್ತಿದ್ದರು. ಹೀಗೆ ಮಂತ್ರಾಕ್ಷತೆ ಹಂಚಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಧನಂಜಯ್ ಮತ್ತು ತಂಡ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸಿದ ದುಷ್ಕಮಿಗಳು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದವರು ಎನ್ನಲಾಗಿದೆ.
ಮಂತ್ರಾಕ್ಷತೆಯನ್ನು ಸಂತೋಷ್ ಮನೆಮನೆಗೆ ಹಂಚುವುದಕ್ಕೆ ಹಲ್ಲೆಗೈದ ತಂಡ ವಿರೋಧ ವ್ಯಕ್ತಪಡಿಸಿತ್ತು. ಆದರೆ ಸಂತೋಷ್ ಮಂತ್ರಾಕ್ಷತೆ ಹಂಚಿದ್ದರು. ಇದೇ ದ್ವೇಷದಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದುಷ್ಕರ್ಮಿಗಳು ಮಗ ಸಂತೋಷ್ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅವರ ತಾಯಿ ತಡೆಯಲು ಬಂದಿದ್ದಾರೆ. ಈ ವೇಳೆ ಸಂತೋಷ್ ತಾಯಿ ಮೇಲೂ ಹಲ್ಲೆಗೈದಿದ್ದಾರೆ. ಸದ್ಯ ಗಾಯಗೊಂಡ ಸಂತೋಷ್ ಹಾಗೂ ತಾಯಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ (BJP) ಆಗ್ರಹಿಸಿದೆ. ಇತ್ತ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿ, ಇದೊಂದು ರಾಜಕೀಯ ಪ್ರೇರಿತ ಹಲ್ಲೆಯಾಗಿದೆ. ಈ ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.