ಬೆಂಗಳೂರು: ಎಲ್ಲ ಧಾರ್ಮಿಕ ಕೇಂದ್ರಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಮಸೀದಿ, ದೇವಸ್ಥಾನ, ಚರ್ಚ್ ಸದಸ್ಯರ ಮೇಲೆಯೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಧ್ವನಿವರ್ಧಕಗಳಿಗೆ ನಿಯಮ ವಿಚಾರವಾಗಿ ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಿಎಂ ಜೊತೆ ಸಭೆ ಆಗಿದೆ. ಧ್ವನಿವರ್ಧಕಗಳ ಬಳಕೆ ಬಗ್ಗೆ ಮೊದಲಿನಿಂದಲೂ ನಿಯಮಗಳಿವೆ. ಆದರೆ ಆ ನಿಯಮಗಳ ಪಾಲನೆ ಆಗುತ್ತಿಲ್ಲ ಎನ್ನುವ ಆರೋಪವೂ ಇದೆ. ಸುಪ್ರೀಂಕೋರ್ಟ್ ಈ ಸಂಬಂಧ ಆದೇಶಗಳನ್ನು ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿಯಮ ಜಾರಿ ಕೆಲಸ ಆಗುತ್ತಿದೆ. ಎಲ್ಲ ಧಾರ್ಮಿಕ ಕೇಂದ್ರಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆದು, ನಿಯಮ ಪಾಲನೆ ಮಾಡಬೇಕು. ನಿಯಮ ಪಾಲಿಸದಿದ್ದರೆ, ಸ್ಥಳೀಯರು ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೈಗಾರಿಕೆ ಪ್ರದೇಶಗಳಲ್ಲಿ ಹಗಲಿನಲ್ಲಿ 75 ಡೆಸಿಬಲ್, ರಾತ್ರಿ ವೇಳೆ 70 ಡೆಸಿಬಲ್ ಇರಬೇಕು. ಕಮರ್ಷಿಯಲ್ ಪ್ರದೇಶಗಳಲ್ಲಿ ಹಗಲು 65 ಡೆಸಿಬಲ್, ರಾತ್ರಿ 60 ಡೆಸಿಬಲ್ ಇರಬೇಕು. ಜನವಸತಿ ಪ್ರದೇಶಗಳಲ್ಲಿ ಹಗಲು 55 ಡೆಸಿಬಲ್, ರಾತ್ರಿ 50 ಡೆಸಿಬಲ್ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು: ಆನಂದ್ ಸಿಂಗ್
ಇದೇ ವೇಳೆ ಬೆಳಗ್ಗೆ 6 ಗಂಟೆಗೂ ಮುಂಚೆಯೇ ನಮಾಜ್ ಮಾಡಲು ಆಜಾನ್ ಮೈಕ್ ಬಳಸಿರುವ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸುಪ್ರೀಂಕೋರ್ಟ್ ಆದೇಶ ಪ್ರಕಾರ ನಿಯಮ ಉಲ್ಲಂಘನೆಯಾಗಿದೆ. ಇದರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ಆ ಹೊತ್ತಿನಲ್ಲಿ ಧ್ವನಿ ವರ್ಧಕಗಳ ಬಳಕೆಗೆ ಅವಕಾಶ ಇಲ್ಲ ಎಂದರು. ಇದನ್ನೂ ಓದಿ: ಅಸನಿ ಚಂಡಮಾರುತದ ಎಫೆಕ್ಟ್ – ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮಳೆ
ದೇವಸ್ಥಾನ, ಚರ್ಚ್, ಮಸೀದಿ ಗಳ ಕಮಿಟಿ ಯಾರು ಇರುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಶಬ್ದ ಮಾಲಿನ್ಯ ಸೆಕ್ಷನ್ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಯುಪಿ ಮಾದರಿ ಅಲ್ಲ ಇಡೀ ದೇಶಕ್ಕೆ ಇರುವ ಕಾನೂನು ಜಾರಿ ಮಾಡಲಾಗುತ್ತದೆ. ಸಿಎಂ ಯುಪಿ ಮಾದರಿ ಅಂತ ಹೇಳಿದ್ದಾರೆ. ಎಲ್ಲರಿಗೂ ಸೂಚನೆ ಕೊಟ್ಟಿದ್ದಾರೆ. ಒಂದು ವಾರ 10 ದಿನಗಳಲ್ಲಿ ಈ ವಿಚಾರವಾಗಿ ನಿಯಮ ಜಾರಿ ಮಾಡುತ್ತೇವೆ. ಗೃಹ ಇಲಾಖೆಗೆ ಈ ಬಗ್ಗೆ ಜವಾಬ್ದಾರಿ ಇದೆ. ನಾವು ಮಾಹಿತಿ ನೀಡುತ್ತೇವೆ. ಗೃಹ ಇಲಾಖೆ ಸಹಕಾರ ಕೊಡುತ್ತವೆ ಎಂದು ಸ್ಪಷ್ಟನೆ ನೀಡಿದರು.