ರಾಯಚೂರು: ಜಿಲ್ಲೆಯ ದೇವದುರ್ಗ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಖೋಟಾ ನೋಟು ಖದೀಮರು ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಖೋಟಾ ನೋಟುಗಳನ್ನು ಹಂಚಿರುವ ಬಗ್ಗೆ ಇದ್ದ ಅನುಮಾನಗಳಿಗೆ ಪುಷ್ಟಿ ಸಿಕ್ಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಖೋಟಾ ನೋಟು ಜಾಲದಲ್ಲಿ ಸಿಲುಕಿದ್ದಾರೆ.
ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಬೇರು ಬಿಟ್ಟಿದ್ದು, ಚುನಾವಣಾ ವೇಳೆ ದೇವದುರ್ಗದ ಜಾಲಹಳ್ಳಿಯಲ್ಲಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದವು.
ಈಗ ಬಂಧಿತರಾಗಿರುವ ಅಯ್ಯಾಳಪ್ಪ, ಪ್ರಕಾಶ್, ಶ್ರೀನಿವಾಸರೆಡ್ಡಿ, ಹನುಮಂತ, ಬಸವ ಹಾಗೂ ರಾಮಕೃಷ್ಣ ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಬೆಲೆಯ 500 ಹಾಗೂ 2000 ರೂಪಾಯಿ ಖೋಟಾ ನೋಟು ಜಪ್ತಿ ಮಾಡಲಾಗಿದೆ.
ಸದ್ಯ ವಿಚಾರಣೆ ಇನ್ನೂ ಮುಂದುವರೆದಿದ್ದು ಪೊಲೀಸರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ.