ಗದಗ: ವಿದ್ಯಾರ್ಥಿಯೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಭಯದಿಂದ ಆರೋಪಿಯೂ ನೇಣಿಗೆ ಶರಣಾದ ಭಯಾನಕ ಘಟನೆ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.
ಜಕ್ಕಲಿ ಗ್ರಾಮದ ನಿವಾಸಿ ವಿಕಾಸ್ ದೊಡ್ಡಮೇಟಿ(18) ಕೊಲೆಯಾದ ವಿದ್ಯಾರ್ಥಿ. ಈತನನ್ನು ಅದೇ ಗ್ರಾಮದ ಶೌಕತ್ ಅಲಿ ಕೊಲೆ ಮಾಡಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಿಯುಸಿ ಮುಗಿಸಿರುವ ವಿಕಾಸ್ ಸೋಮವಾರದಂದು ಸಿಇಟಿ ಪರೀಕ್ಷೆ ಬರೆಯಲು ಸಜ್ಜಾಗಿದ್ದನು. ಆದರೆ ದುರಾದೃಷ್ಟವಶಾತ್ ಕೊಲೆಯಾಗಿದ್ದಾನೆ.
ಇಂದು ಬೆಳಗ್ಗಿನ ಜಾವ ಬಹಿರ್ದೆಸೆಗೆ ತೆರಳಿದ ವೇಳೆ ವಿಕಾಸ್ ಹಾಗೂ ಶೌಕತ್ ಅಲಿ ನಡುವೆ ಜಗಳ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ವಿಕಾಸ್ ಮೇಲೆ ಕೊಡಲಿಯಿಂದ ಶೌಕತ್ ಅಲಿ ಹಲ್ಲೆ ಮಾಡಿದ್ದಾನೆ. ಇದರಿಂದ ವಿಕಾಸ್ ಕುತ್ತಿಗೆಗೆ ಬಲವಾಗಿ ಹೊಡೆತ ಬಿದ್ದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆ ಮಾಡಿದ ನಂತರ ಶೌಕತ್, ಭಯದಿಂದ ತಾನೂ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ನರೇಗಲ್ ಹಾಗೂ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೌಕತ್ ಅಲಿ ಮಾನಸಿಕ ಅಸ್ವಸ್ಥನೆಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ನರೇಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.