ರಾಯಚೂರು: ಹದಗೆಟ್ಟ ರಸ್ತೆಯ ಬಗ್ಗೆ ಫೇಸ್ ಬುಕ್ನಲ್ಲಿ ಬೆಳಕು ಚೆಲ್ಲಿದ್ದಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಬೆಂಬಲಿಗರು ಹಾಗೂ ಪೊಲೀಸರು ಯುವಕರೊಬ್ಬರಿಗೆ ಥಳಿಸಿರುವ ಘಟನೆ ಸಿಂಧನೂರಿನಲ್ಲಿ ನಡೆದಿದೆ.
ದುರಂತ ಅಂದರೆ ತಮ್ಮ ಬೆಂಬಲಿಗರ ಕೃತ್ಯವನ್ನು ಶಾಸಕ ಪ್ರತಾಪ್ ಗೌಡ ಸಮರ್ಥಿಸಿಕೊಂಡಿದ್ದಾರೆ. ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಬೆಂಬಲಿಗರು ಆಕ್ರೋಶಗೊಂಡು ಥಳಿಸಿರಬಹುದು ಅಂತ ಪ್ರತಾಪ್ ಗೌಡ ಹೇಳಿದ್ದಾರೆ.
ಸಿಂಧನೂರು ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರದ ಕೋಳಬಾಳ ಗ್ರಾಮದ ಹದಗೆಟ್ಟ ರಸ್ತೆ ಕುರಿತು ಸೆಪ್ಟಂಬರ್ 10 ರಂದು ಪಬ್ಲಿಕ್ ಟಿವಿ ಸಹ ವರದಿ ಪ್ರಸಾರ ಮಾಡಿತ್ತು. ಇದೇ ರಸ್ತೆಯ ಕುರಿತು ಹಂಚಿನಾಳ ಗ್ರಾಮದ ಯುವಕ ಶರಣಬಸವ ನಾಯಕ್ ತಮ್ಮ ಫೇಸ್ ಬುಕ್ ಅಕೌಂಟನಲ್ಲಿ ರಸ್ತೆ ಫೋಟೋ ಸಹಿತ ಬರೆದುಕೊಂಡಿದ್ದರು. ಶರಣಬಸವರ ಈ ಪೋಸ್ಟ್ ಗೆ ಬಸವರಾಜ್ ಎಂಬವರು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಶಾಸಕರ ಬೆಂಬಲಿಕರು ಥಳಿಸಿದ್ದಾರೆ.
ಸಿಂಧನೂರು ಡಿವೈಎಸ್ಪಿ ಶ್ರೀಧರ್ ಮಾಳಗೇರ್ ಹಾಗೂ ಸಿಪಿಐ ನಾಗರಾಜ್ ಕಮ್ಮಾರ್ ಶಾಸಕರ ಬೆಂಬಲಿಗರ ಮೌಖಿಕ ದೂರಿನ ಮೇರೆಗೆ ಶರಣಬಸವನನ್ನು ಸಿಂಧನೂರು ವೃತ್ತ ನೀರಿಕ್ಷಕರ ಕಚೇರಿಗೆ ಕರೆಯಿಸಿ ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಶರಣಬಸವ ಶಾಸಕರ ಸಂಬಂಧಿ ಡಿವೈಎಸ್ಪಿ ಹಾಗೂ ಸಿಪಿಐ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಶರಣಬಸವ ನಾಯಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.