ಕಾರವಾರ: ಪುರಸಭೆ ವಾಣಿಜ್ಯ ಕಟ್ಟಡಕ್ಕೆ ಭೂತದ ಕಾಟವಿದೆ ಎಂದು ತಿಳಿದು ಅಧಿಕಾರಿಗಳು ಹಾಗೂ ವರ್ತಕರು ಸೇರಿ ವಾಣಿಜ್ಯ ಕಟ್ಟಡದಲ್ಲಿ ಹೋಮ ಮಾಡಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನೆಡೆದಿದೆ.
ಕಳೆದ ಸೆಪ್ಟೆಂಬರ್ 14 ರಂದು ಭಟ್ಕಳ ಪುರಸಭೆಯು ವಾಣಿಜ್ಯ ಮಳಿಗೆ ತೆರವು ವೇಳೆಯಲ್ಲಿ ತೆರವುಗೊಳಿಸದಂತೆ ಖಂಡಿಸಿ ರಾಮಚಂದ್ರ ನಾಯ್ಕ ಎಂಬ ವರ್ತಕರೊಬ್ಬರು, ಇದೇ ಕಟ್ಟಡದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಒಂದು ತಿಂಗಳಿಂದ ಈ ಕಟ್ಟಡದಲ್ಲಿ ಸಾಕಷ್ಟು ಸಮಸ್ಯೆಗಳು ಹೆಚ್ಚಾದ್ದರಿಂದಾಗಿ ಪುರಸಭೆ ಅಧಿಕಾರಿಗಳು ಹಾಗೂ ವರ್ತಕರು ಹೋಮದ ಮೊರೆಹೋಗಿದ್ದರು.
ಪುರಸಭೆ ವಾಣಿಜ್ಯ ಕಟ್ಟಡದ ನೆಲಮಾಳಿಗೆಯಲ್ಲಿ ಹೋಮ ಹವನ ಮಾಡಿಸಿದ್ದಾರೆ. ಇದರ ಜೊತೆಯಲ್ಲಿ ಮೂರು ದಿನಗಳ ಕಾಲ ನಾಗಾರಾಧನೆ ನೆರವೇರಲಿದೆ. ಇನ್ನು ಈ ಕುರಿತು ಜನರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಮೃತ ವ್ಯಕ್ತಿಗೆ ಪರಿಹಾರ ಕೊಡದೇ ವಾಣಿಜ್ಯ ಕಟ್ಟಡದಲ್ಲಿ ಪೂಜೆ ಮಾಡಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಹಳ ವರ್ಷಗಳಿಂದ ಈ ಕಟ್ಟಡದಲ್ಲಿ ಸಮಸ್ಯೆಯಿದ್ದು, ಇದರ ಪರಿಹಾರಕ್ಕಾಗಿ ನಮ್ಮ ಸ್ವಂತ ಖರ್ಚಿನಿಂದ ಈ ಪೂಜೆ ಮಾಡಿಸಲಾಗುತ್ತಿದೆ ಎಂದು ಪುರಸಭಾ ಅಧಿಕಾರಿ ವೆಂಕಟೇಶ್ ನಾವುಡ ತಿಳಿಸಿದ್ದಾರೆ.