ಬೆಂಗಳೂರು: ಕಂಬಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ಇಂದು ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡನೆ ಆಗಲಿದೆ.
ಕೇಂದ್ರದ ಪ್ರಾಣಿ ಹಿಂಸೆ ತಡೆ ಕಾಯ್ದೆಯಲ್ಲಿ ಕಂಬಳ ಮತ್ತು ಎತ್ತಿನ ಗಾಡಿ ಓಟಕ್ಕೆ ಕರ್ನಾಟಕದಲ್ಲಿ ವಿನಾಯತಿ ನೀಡಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆಯ ತಿದ್ದುಪಡಿ ವಿಧೇಯಕ 2017ನ್ನು ಸಚಿವ ಎ. ಮಂಜು ಮಂಡಿಸಲಿದ್ದಾರೆ. ಕಂಬಳದ ಜೊತೆಗೆ ಎತ್ತಿನ ಗಾಡಿ ಓಟಕ್ಕೂ ಈ ತಿದ್ದುಪಡಿ ವಿಧೇಯಕ ಅನುವು ಮಾಡಿಕೊಡಲಿದೆ.
ಎತ್ತಿನ ಗಾಡಿ ಓಟದಲ್ಲಿ ಮತ್ತು ಕಂಬಳದಲ್ಲಿ ಪ್ರಾಣಿಗಳ ಉಸ್ತುವಾರಿ ಹೊತ್ತವರು ಅನಗತ್ಯವಾಗಿ ಪ್ರಾಣಿಗಳಿಗೆ ನೋವು ಮತ್ತು ಸಂಕಟ ಉಂಟು ಮಾಡದಂತೆ ವಿಧೇಯಕದಲ್ಲಿ ಷರತ್ತು ವಿಧಿಸಲಾಗುತ್ತಿದೆ.
ಇದರ ಜೊತೆಗೆ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ, ಕನಿಷ್ಠ ಮಜೂರಿಗಳ ತಿದ್ದುಪಡಿ ವಿಧೇಯಕ ಸಹ ಮಂಡನೆಯಾಗಲಿದೆ. ಬಳಿಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಮುಂದುವರಿಯಲಿದೆ. ಇನ್ನು, ವಿಧಾನಪರಿಷತ್ನಲ್ಲೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.