ಕೋಲಾರ: ಬೆಂಗಳೂರಿನಲ್ಲಿ (Bengaluru) ಬಂದು ನೆಲೆಸಿದ್ದ ಗುಜರಾತ್ (Gujarat) ವ್ಯಕ್ತಿಯೊಬ್ಬ ಪೊಲೀಸ್ ವಿಚಾರಣೆಗೆ (Police Enquiry) ಹೆದರಿ ತನ್ನ ಮೂರು ವರ್ಷದ ಮಗಳನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಕಳೆದ ರಾತ್ರಿ 3 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಜೊತೆಗೆ ಕೆರೆಯ ದಡದಲ್ಲೇ ನೀಲಿ ಬಣ್ಣದ I-20 ಕಾರು ಸಹ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ (Kolar Rural Police) ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ, ಗುಜರಾತ್ ಮೂಲದ ಕುಟುಂಬ ಅನ್ನೋದು ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಅಲೆಮಾರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿ: ಈಶ್ವರಪ್ಪ
ಸ್ಥಳಕ್ಕೆ ಬಂದ ಪತ್ನಿ ಭವ್ಯ, ಪತಿ ರಾಹುಲ್ ಹಾಗೂ ಮೂರು ವರ್ಷದ ಮಗು ಜಿಯಾ ಎಂಬುದಾಗಿ ಗುರುತಿಸಿದ್ದಾರೆ. ನಿನ್ನೆ ಬೆಳಗ್ಗೆ ಮಗುವನ್ನು ಶಾಲೆಗೆ (School) ಬಿಟ್ಟು ಬರೋದಾಗಿ ರಾಹುಲ್ ಹೇಳಿ ಹೋಗಿದ್ದರು. ಬಳಿಕ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈಗ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾದ್ರೆ ಮಾತ್ರ ಸಂಸಾರ – ಪತ್ನಿ ವಿರುದ್ಧ ಠಾಣೆಯ ಮೆಟ್ಟಿಲೇರಿದ ಪತಿ
ಏನಿದು ಘಟನೆ?
2-3 ವರ್ಷಗಳ ಹಿಂದೆಯಷ್ಟೇ ರಾಹುಲ್ – ಭವ್ಯ ದಂಪತಿ ಗುಜರಾತ್ನಿಂದ (Gujarat) ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕಳೆದ 6 ತಿಂಗಳಿನಿಂದ ರಾಹುಲ್ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು. ಇದರಿಂದ ಸಾಲದ ಹೊರೆ ಹೆಚ್ಚಾಯಿತು. ಇದೇ ವಿಚಾರಕ್ಕೆ ರಾಹುಲ್ ತುಂಬಾ ಬೇಸರ ಮಾಡಿಕೊಂಡಿದ್ದರು.
ಇತ್ತೀಚೆಗೆ ರಾಹುಲ್ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಬಾಗಲೂರು ಪೊಲೀಸ್ ಠಾಣೆಗೆ (Bagaluru Police Station) ದೂರು ನೀಡಿದ್ದರು. ಪದೇ-ಪದೇ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿ ಬರುತ್ತಿದ್ದರು. ಪೊಲೀಸರು ದೂರಿನ ಅನ್ವಯ ತನಿಖೆ ನಡೆಸಿದಾಗ, ಮನೆಯಲ್ಲಿ ಇದ್ದ ಒಡವೆಯನ್ನು ರಾಹುಲ್ ತಾನೇ ಕದ್ದು ಚೆಮ್ಮನೂರ್ ಜ್ಯುವೆಲರ್ಸ್ನಲ್ಲಿ ಅಡವಿಟ್ಟು, ಬಳಿಕ ಕಳ್ಳತನದ ನಾಟಕವಾಡಿ ಸುಳ್ಳು ದೂರು ನೀಡಿದ್ದ ವಿಚಾರ ತಿಳಿದು ಬಂದಿದೆ. ಇದರಿಂದ ಪೊಲೀಸರು ರಾಹುಲ್ ಮೇಲೆ ಕೋಪಗೊಂಡು ಠಾಣೆಗೆ ಬರುವಂತೆ ತಾಕೀತು ಮಾಡಿದ್ದಾರೆ. ಮನೆಗೂ ಬಂದು ಹೇಳಿ ಹೋಗಿದ್ದಾರೆ. ಇದೇ ವಿಚಾರಕ್ಕೆ ಭಯ ಪಟ್ಟು ರಾಹುಲ್ ಏನಾದ್ರೂ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ರಾಹುಲ್ ಬಳಿಯಿದ್ದ ಪರ್ಸ್, ಮೊಬೈಲ್ ಎಲ್ಲವೂ ಕಾರ್ನಲ್ಲೇ ಇದೆ. ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು, ಕೆಂದಟ್ಟಿ ಕೆರೆಯಲ್ಲಿ ರಾಹುಲ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.