ಮಂಗಳೂರು: ಅಧಿಕಾರದಲ್ಲಿದ್ದಾಗ ಟೋಲ್ ಗೇಟ್ (Toll Plaza) ತೆರವು ಮಾಡುವ ಮಾತು ನೀಡಿ ಹೋರಾಟಗಾರರ ಜೊತೆ ಭಾಗವಹಿಸಿ ಪ್ರಚಾರ ಪಡೆದುಕೊಂಡು ಎದ್ದು ಹೋಗಿರುವ ಶಾಸಕ ಯು.ಟಿ ಖಾದರ್ (U.T Khader) ಅವರಿಗೆ ಟೋಲ್ ಗೇಟ್ ತೆರವು ಪ್ರಕ್ರಿಯೆ ಆರಂಭಿಸಲು ವಿಫಲರಾಗಿ, ಇದೀಗ ನನ್ನ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಸ್ಪದ ಎಂದು ಶಾಸಕ ಭರತ್ ಶೆಟ್ಟಿ ವೈ (Bharath Shetty), ಯು.ಟಿ ಖಾದರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಮಾತುಕತೆ ಮಾಡಿರುವೆ ಎಂದು ಯು.ಟಿ ಖಾದರ್ ಹೇಳಿಕೊಂಡು ಬಂದಿದ್ದಾರೆ. ಆದರೆ ರಾಜ್ಯದಿಂದ ಕೇಂದ್ರದ ಹೆದ್ದಾರಿ ಇಲಾಖೆಗೆ ಕಾನೂನಾತ್ಮಕವಾಗಿ ಅಧಿಕೃತ ಪತ್ರವನ್ನು ಕಳಿಸಲು ಕೂಡ ಇವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ನಿಂದ (Congress) ಇಂತಹ ಆರೋಪಗಳು ನಿರೀಕ್ಷಿತ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ದುಬೈ ಅಥವಾ ನ್ಯೂಯಾರ್ಕ್ನಲ್ಲಿ ಕುಟುಂಬದ ಕಚೇರಿ ತೆರೆಯಲು ಮುಂದಾದ ಅದಾನಿ
ಇರ್ಕಾನ್ ಸಂಸ್ಥೆ ಹಾಗೂ ನವಯುಗ ಖಾಸಗಿ ಸಂಸ್ಥೆಯು ಟೋಲ್ ಗೇಟ್ ಸ್ಥಾಪಿಸಲು ಅವಕಾಶ ನೀಡುವ ಸಲುವಾಗಿ 2013ರ ಮಾರ್ಚ್ನಲ್ಲಿ ಹೆಜಮಾಡಿ ಟೋಲ್ ಗೇಟ್, ಜೂನ್ನಲ್ಲಿ ಸುರತ್ಕಲ್ನಲ್ಲಿ ಟೋಲ್ ಗೇಟ್ ನಿರ್ಮಿಸಲು ಈ ಹಿಂದಿನ ಯುಪಿಎ (UPA) ಸರ್ಕಾರವೇ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿ ಕೊಡುಗೆ ನೀಡಿದೆ. ಅಂದೇ ಹಿಂಪಡೆಯಲು ಇದ್ದ ಅವಕಾಶವನ್ನು ಕೈ ಚೆಲ್ಲಿರುವ ಕಾಂಗ್ರೆಸ್ ರಾಜಕೀಯಕ್ಕಾಗಿ ಇದೀಗ ಲಾಭ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
60 ಕಿಲೋಮೀಟರ್ ಒಳಗೆ ಟೋಲ್ ಗೇಟ್ ನಿರ್ಮಾಣ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಈ ಹಿಂದೆ ಆಡಳಿತ ನಡೆಸಿದ್ದ ಯುಪಿಎ ಸರ್ಕಾರದ ಹೆದ್ದಾರಿ ಮಂತ್ರಿಗಳಿಗೆ ತಿಳಿದಿರಲಿಲ್ಲವೇ? ಈಗಿನ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿಯೇ 60 ಕಿಲೋ ಮೀಟರ್ ವ್ಯಾಪ್ತಿಗಳಲ್ಲಿ ಒಂದು ಟೋಲ್ ಗೇಟ್ ಇರುವುದು ಸರಿಯಾದ ಕ್ರಮ ಎಂದು ಒಪ್ಪಿಕೊಂಡು ದೇಶದಾದ್ಯಂತ ಇರುವ ಟೋಲ್ ಗೇಟ್ಗಳ ವಿಲೀನಕ್ಕೆ ಮುಂದಾಗಿರುವುದನ್ನು ಯು.ಟಿ ಖಾದರ್ ಅವರು ಮುಕ್ತ ಮನಸ್ಸಿನಿಂದ ಪ್ರಶಂಶಿಸುವ ಮನಸ್ಸು ಮಾಡಬೇಕು ಎಂದು ಸಲಹೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಶಾರುಖ್ ಮನೆಮುಂದೆ ಜಮಾಯಿಸಿದ ಜನಸಾಗರ ನೋಡಿ ಅಚ್ಚರಿಪಟ್ಟ `ಕಾಂತಾರ’ ಹೀರೋ
ನನಗೆ ಕೇವಲ ಆಶ್ವಾಸನೆ ನೀಡಿ ಹಿಂದೆ ಹೋಗುವುದರಲ್ಲಿ ಆಸಕ್ತಿ ಇಲ್ಲ. ಗಂಭೀರವಾದ ಪ್ರಯತ್ನವನ್ನು ನಡೆಸಿ ಸಂಸದರ ಮುತುವರ್ಜಿಯಲ್ಲಿ ಟೋಲ್ ಗೇಟ್ ಅನ್ನು ತೆರವುಗೊಳಿಸಲು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.