ತೆಲುಗಿನ ಸೂಪರ್ ಜೋಡಿ ಸಮಂತಾ (Samantha) ಮತ್ತು ನಾಗ ಚೈತನ್ಯ ಡಿವೋರ್ಸ್ (Divorce) ನಂತರ ಅವರ ಜೀವನದಲ್ಲಿ ಹಲವಾರು ಘಟನೆಗಳು ನಡೆದಿವೆ. ಏನೇ ಘಟನೆಗಳು ಜರುಗಿದರೂ, ಇಬ್ಬರೂ ಮಾತ್ರ ವಿಚ್ಚೇದನೆಯಿಂದ ದೂರ ಸರಿಯಲು ಮನಸ್ಸು ಮಾಡಿರಲಿಲ್ಲ. ಆದರೆ, ಇದೀಗ ಈ ಜೋಡಿ ಮತ್ತೆ ಒಂದಾಗಲು ಮುಂದಾಗಿದೆ ಎನ್ನುವ ವಿಷಯ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈ ಜೋಡಿಯನ್ನು ಒಂದು ಮಾಡಲು ಸ್ವತಃ ನಾಗ ಚೈತನ್ಯ ತಂದೆ ನಾಗಾರ್ಜುನ ಅಖಾಡಕ್ಕೆ ಇಳಿದಿದ್ದಾರಂತೆ.
ಸಮಂತಾರ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ನಾಗಚೈತನ್ಯ ಕಾಲ್ ಮಾಡಿ ಸಮಂತಾರ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸಮಂತಾ ಕೂಡ ಅಷ್ಟೇ ಆಸಕ್ತಿಯಿಂದ ಮಾತನಾಡಿದ್ದಾರಂತೆ. ಇಬ್ಬರಲ್ಲೂ ಇದೀಗ ಪ್ರೀತಿ ಮತ್ತೆ ಚಿಗುರುತ್ತಿರುವುದರಿಂದ ಈ ಜೋಡಿ ಒಂದಾಗಿರಲಿ ಎನ್ನುವುದು ಹಲವರ ಆಸೆ. ಆ ಆಸೆಗೆ ಪೂರಕ ಎನ್ನುವಂತೆ ನಾಗಾರ್ಜುನ (Nagarjuna) ಕೆಲಸ ಮಾಡುತ್ತಿದ್ದಾರಂತೆ. ಈ ಕೆಲಸಕ್ಕೆ ಸಕಾರಾತ್ಮಕ ಸ್ಪಂದನೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಥರ್ವ್-ಆಧವ್ ಎಂದು ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ನಟಿ ಅಮೂಲ್ಯ
ಸಮಂತಾ ಮತ್ತು ನಾಗಚೈತನ್ಯ (Naga Chaitanya) ಈಗಾಗಲೇ ದೂರವಾಗಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದಾರೆ. ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಗಿದ್ದು, ಅವುಗಳನ್ನು ತಿದ್ದುಕೊಳ್ಳುವತ್ತ ಮನಸ್ಸು ಮಾಡಿದ್ದಾರೆ. ಈ ಕಾರಣದಿಂದಾಗಿಯೇ ನಾಗಾರ್ಜುನ್ ಇಂಥದ್ದೊಂದು ಕೆಲಸಕ್ಕೆ ಕೈ ಹಾಕಿದ್ದಾರಂತೆ. ಮತ್ತೆ ಈ ಜೋಡಿ ಒಂದಾಗಿ ಸಾಕಷ್ಟು ಉತ್ತಮ ಸಿನಿಮಾಗಳನ್ನು ನೀಡಲಿ ಎನ್ನುವುದು ಇಬ್ಬರೂ ಅಭಿಮಾನಿಗಳ ಆಶಯ.