ಮುಂಬೈ: ಬಂಡಾಯ ಶಾಸಕರ ಆತ್ಮಗಳು ಸತ್ತಿವೆ. ಅವರ ದೇಹಗಳು ಮಾತ್ರ ಮುಂಬೈಗೆ ಮರಳುತ್ತವೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುವಾಹಟಿಯಲ್ಲಿರುವ 40 ಬಂಡಾಯ ಶಾಸಕರು ಜೀವಂತ ಶವಗಳಾಗಿದ್ದಾರೆ. ಅವರ ದೇಹಗಳು ಮಾತ್ರ ಇಲ್ಲಿಗೆ ಬರುತ್ತವೆ. ಆದರೆ ಅವರ ಆತ್ಮಗಳು ಮೃತಪಟ್ಟಿವೆ. ಮುಂದೆ ಏನಾಗುತ್ತದೆ ಎನ್ನುವುದು ಆ ಶಾಸಕರಿಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
40 ಶವಗಳು ಅಸ್ಸಾಂನಿಂದ ಮಹಾರಾಷ್ಟ್ರಕ್ಕೆ ಬರಲಿವೆ. ಅವರೆಲ್ಲರನ್ನು ಮರಣೋತ್ತರ ಪರೀಕ್ಷೆಗಾಗಿ ನೇರವಾಗಿ ಶವಾಗಾರಕ್ಕೆ ಕಳುಹಿಸಲಾಗುವುದು ಎಂದು ವ್ಯಂಗ್ಯವಾಡಿದರು.
ಶಿವಸೇನಾದಲ್ಲಿ ಬಂಡಾಯ ಮುಂದುವರಿದಿದ್ದು, ಶಿವಸೈನಿಕರನ್ನು ಬೀದಿಗಿಳಿಸುವುದಾಗಿ ಶನಿವಾರ ಸಂಜಯ್ ರಾವತ್ ಬಹಿರಂಗ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಿಲ್ಲ ಮತ್ತು ಶಿವಸೇನಾ ಕೊನೆಯವರೆಗೂ ಹೋರಾಡಲಿದೆ ಎಂದು ಖಡಕ್ಕಾಗಿ ತಿಳಿಸಿದ್ದರು. ಇದನ್ನೂ ಓದಿ: ನಾನೂ ಸೈನಿಕನಂತೆ ಹೋರಾಡಿದ್ದೆ – ಮನ್ ಕಿ ಬಾತ್ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಮೋದಿ
ಇಂದು ಶಿವಸೇನಾದ ಮತ್ತೊಬ್ಬ ನಾಯಕರಾಗಿರುವ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಾಮಂತ್ ಬಂಡಾಯ ಶಾಸಕರ ಗುಂಪಿಗೆ ಸೇರಿದ್ದಾರೆ. ಈ ಮೂಲಕ ಶಿಂಧೆ ಪಾಳಯಕ್ಕೆ ಸೇರ್ಪಡೆಯಾದ 8ನೇ ಸಚಿವರಾಗಿದ್ದಾರೆ. ಇದನ್ನೂ ಓದಿ: ಶಿಂಧೆ ಬಣಕ್ಕೆ ಸೇರಿದ ಮತ್ತೊಬ್ಬ ಮಹಾರಾಷ್ಟ್ರ ಸಚಿವ