ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸೂಪರ್ ಪವರ್ ದೇಶವಾಗಿದೆ ಅಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರಕ್ಕೆ 8 ವರ್ಷ ತುಂಬಿದ ಹಿನ್ನಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಮೋದಿಯವರು ದೇಶದಲ್ಲಿ ವಿಕಾಸ ಆಗಬೇಕು. ವಿದೇಶದಲ್ಲಿ ಭಾರತಕ್ಕೆ ಗೌರವ ಸಿಗಬೇಕು. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ದೇಶದ ಸೈನ್ಯಕ್ಕೆ ಗೌರವ ಸಿಗಬೇಕು ಎಂಬ ವಿಷಯಗಳನ್ನು ಇಟ್ಟುಕೊಂಡು ದೇಶದ ಪ್ರವಾಸ ಮಾಡಿದ್ದರು. ಎಂಟು ವರ್ಷದಲ್ಲಿ ಮೋದಿ ಮಂತ್ರಿ ಮಂಡಲದ ಯಾವುದೇ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಇಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ವಿದೇಶಕ್ಕೆ ಹೋದರೆ ಅವರನ್ನು ಗೌರವದಿಂದ ನೋಡುತ್ತಿರಲಿಲ್ಲ. ಈಗ ನಮ್ಮ ಪ್ರಧಾನಿ ವಿದೇಶಕ್ಕೆ ಹೋದರೆ ಕೆಂಪು ಹಾಸಿನ ಸ್ವಾಗತ ದೊರೆಯುತ್ತದೆ ಎಂದರು.
ವಿದೇಶದಲ್ಲಿ ಮೋದಿಗೆ ಗೌರವ ದೊರೆತರೆ ಅದು ಭಾರತಕ್ಕೆ ಸಿಕ್ಕ ಗೌರವ. ಉಕ್ರೇನ್ ಯುದ್ಧ ಭೂಮಿಯಲ್ಲಿ ಸಿಲುಕಿದ್ದ 20 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಕೆಲಸ ಮಾಡಿದ್ದಾರೆ. ಉಕ್ರೇನ್ ಪ್ರಧಾನಿ ಮತ್ತು ರಷ್ಯಾ ಅಧ್ಯಕ್ಷರಿಗೆ ನೇರವಾಗಿ ದೂರವಾಣಿ ಮೂಲಕ ಮಾತನಾಡಿದ ವಿಶ್ವದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರು. ಇದು ಭಾರತಕ್ಕೆ ಸಿಕ್ಕ ಗೌರವ. ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೂ ಭಾರತ ಉತ್ತಮ ಸಂಬಂಧ ಇಟ್ಟುಕೊಂಡಿದೆ ಎಂದು ಹೇಳಿದರು.
ಬಾಂಗ್ಲಾ ಗಡಿ ನಿಗದಿ ಮಾಡಿರಲಿಲ್ಲ. ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾದ ಮೇಲೆ ಬಾಂಗ್ಲಾ ಗಡಿ ನಿಗದಿ ಪಡಿಸುವ ಕೆಲಸ ಮಾಡಲಾಯಿತು. ಪಕ್ಕದ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನಗಳ ಮೂಲಕ ಭಯೋತ್ಪಾದನೆ, ಮಾನವ ಕಳ್ಳ ಸಾಗಾಣಿಕೆ, ಡ್ರಗ್ಸ್ ಸರಬರಾಜು, ವೇಶ್ಯಾವಾಟಿಕೆಗೆ ಮಹಿಳೆಯರನ್ನು ಸರಬರಾಜು ಮಾಡುತ್ತಿದ್ದರು. ಹೀಗಾಗಿ ಗಡಿ ಭದ್ರ ಮಾಡುವ ಕೆಲಸ ಮಾಡಲಾಯಿತು ಎಂದು ತಿಳಿಸಿದರು.
ಸೈನ್ಯಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಸ್ವಾವಲಂಬಿ ಭಾರತದ ಮೂಲಕ ಇಲ್ಲಿಯೇ ಉತ್ಪಾದನೆ ಮಾಡುವ ಕೆಲಸ ಆಗುತ್ತಿದೆ. ದೇಶದ ಸೈನಿಕರಿಗೆ ವೈರಿಗಳ ವಿರುದ್ಧ ಗುಂಡು ಹೊಡೆಯುವ ಸ್ವಾಂತಂತ್ರ್ಯವನ್ನು ಮೋದಿಯವರು ಕೊಟ್ಟಿದ್ದಾರೆ. ಮನಮೋಹನ್ ಸಿಂಗ್ ಕಾಲದಲ್ಲಿ 10 ವರ್ಷ ಕೇವಲ ಭ್ರಷ್ಟಾಚಾರ ನಡೆಯಿತು. ಈಗ ವಿದೇಶಿ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದೆ ಬರುತ್ತಿದ್ದಾರೆ ಎಂದರು. ಇದನ್ನೂ ಓದಿ: RSSಗೆ ಗೊತ್ತಾಗಿದೆ ಈ ಹೋರಾಟದಲ್ಲಿ ಸೋಲಾಗುತ್ತೆ ಅಂತಾ ಹಾಗಾಗಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ: ಅಬ್ದುಲ್ ರಜಾಕ್
ದೇಶದಲ್ಲಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. 12 ಕೋಟಿ ಉಜ್ವಲ ಗ್ಯಾಸ್ ವಿತರಣೆ, ಬಡವರ ಮನೆಗಳಿಗೆ ದೀನದಯಾಳ್ ಉಪಾಧ್ಯಾಯ ಯೋಜನೆ ಅಡಿಯಲ್ಲಿ ವಿದ್ಯುತ್ ನೀಡುವ ಕೆಲಸ ಮಾಡಿದ್ದಾರೆ. ಕೊರೊನಾಕ್ಕೆ ದೇಶದಲ್ಲಿಯೇ ಮೊದಲ ಬಾರಿಗೆ ಲಸಿಕೆ ಉತ್ಪಾದನೆ ಮಾಡಲಾಯಿತು. ದೇಶದಲ್ಲಿ 94 ಕೋಟಿ ಜನರಿಗೆ ಲಸಿಕೆ ಕೊಡಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಾಗಿದೆ. ವೈದ್ಯಕೀಯ ಸೀಟ್ಗಳ ಸಂಖ್ಯೆ ಹೆಚ್ಚಳವಾಗಿದೆ ಎಂದರು. 2013ರವರೆಗೆ ಕೃಷಿಗೆ 23,000 ಕೋಟಿ ಬಜೆಟ್ನಲ್ಲಿ ಇಡಲಾಗುತ್ತಿತ್ತು. ಮೋದಿಯವರು 1,32 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಅಲ್ಲದೇ ರೈತ ಸಮ್ಮಾನ್ ಯೋಜನೆ ಮೂಲಕ 11 ಕೋಟಿ ರೈತರಿಗೆ 1.80. ಲಕ್ಷ ಕೋಟಿ ರೂ. ನೇರ ಪಾವತಿ ಮೂಲಕ ರೈತರ ಅಕೌಂಟ್ಗಳಿಗೆ ವರ್ಗಾವಣೆ ಮಾಡಲಾಗಿದೆ.
ಕೇಂದ್ರ ಸರ್ಕಾರ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಯುವಕರು ಕೃಷಿಯಲ್ಲಿ ತೊಡಗಿಕೊಂಡ ಪರಿಣಾಮ 3 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ ಮಾಡಲಾಗಿದೆ. ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಯಿತು ಎಂದು ಮಾಹಿತಿ ನೀಡಿದರು. ಕೃಷಿಕರ ಆದಾಯ ದ್ವಿಗುಣ ಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಅದಕ್ಕಾಗಿ ರೈತರಿಗೆ ಯಾಂತ್ರೀಕರಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಹನಿ ನೀರಾವರಿ ಯೋಜನೆ, ಎಫ್ಪಿಒ ಮೂಲಕ ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ. ಇದರಿಂದ ರೈತರ ಆದಾಯ ಹೆಚ್ಚಳವಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ರಾಜ್ಯ ರಾಜಕೀಯಕ್ಕೆ ವಾಪಸ್ ಬರೊಲ್ಲ: ಶೋಭಾ ಕರಂದ್ಲಾಜೆ
ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿದೇಶಗಳಿಂದ ಬರುವ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ. ರಷ್ಯಾ ಉಕ್ರೇನ್ ಯುದ್ಧದಿಂದ ಕಚ್ಚಾ ತೈಲ ಮತ್ತು ಖಾದ್ಯ ತೈಲ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ನಾವು ಸ್ವಾವಲಂಬಿ ಆಗಿಲ್ಲ. ರಸಗೊಬ್ಬರ ಉತ್ಪಾದನೆ ನಮ್ಮ ಕೈಯಲ್ಲಿ ಇಲ್ಲ. ಹೀಗಾಗಿ ಬೆಲೆ ಏರಿಕೆ ಆಗುತ್ತಿದೆ. ಆದರೂ ಮೋದಿ ಸರ್ಕಾರ ಇದನ್ನು ತನ್ನ ಮೇಲೆ ಹಾಕಿಕೊಂಡು ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ಅಲ್ಪ ಸಂಖ್ಯಾತರ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲ. ಸಣ್ಣ ಪುಟ್ಟ ಜಾತಿಯ ಗಲಾಟೆಗಳು ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿವೆ. ಭಯೋತ್ಪಾದನೆ ನಿಯಂತ್ರಣ ಮಾಡುವುದು ಕೋಮು ಗಲಭೆ ಎಂದು ಬಿಂಬಿಸಿದರೆ ನಾವು ಉತ್ತರ ಕೊಡುವ ಅಗತ್ಯವಿಲ್ಲ ಎಂದರು. ಹಿಜಬ್ ಗಲಾಟೆ ಕೋಮು ಗಲಭೆ ಅಲ್ಲ. ಎಸ್ಡಿಪಿಐ ರಾಜಕೀಯ ಕಾರಣಕ್ಕೆ ಗಲಾಟೆ ಮಾಡುವ ಕೆಲಸ ಮಾಡುತ್ತಿದೆ. ಸಂಘ ಸಂಸ್ಥೆಗಳನ್ನು ನಿಷೇಧ ಮಾಡಲು ಪೂರಕ ದಾಖಲೆ ಸಂಗ್ರಹಿಸುವ ಕೆಲಸ ಆಗುತ್ತಿದೆ. ಶೀಘ್ರವೇ ಆ ಸಂಘಟನೆಗಳು ಬ್ಯಾನ್ ಆಗುವ ವಿಶ್ವಾಸವಿದೆ ಎಂದರು.