ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಪಠ್ಯ ಪುಸ್ತಕ ಸಮಿತಿಯು ಪ್ರಮುಖ ದಾರ್ಶನಿಕರ ಮತ್ತು ದೇಶಭಕ್ತರ ಬಗೆಗಿನ ಪಠ್ಯಗಳನ್ನು ಕೈ ಬಿಟ್ಟಿದೆ. ರಾಜ್ಯದ ಹೆಮ್ಮೆಯ ಸಾಹಿತಿಗಳ ಮತ್ತು ಬಹುತ್ವದ ಸಂಸ್ಕೃತಿಗೆ ಪೂರಕವಾದ ಲೇಖನಗಳನ್ನು ಕೈ ಬಿಟ್ಟಿದೆ. ಸಂಕುಚಿತವಾದವನ್ನು ಬೆಂಬಲಿಸುವ ಹಾಗೂ ಮತೀಯವಾದವನ್ನು ಪ್ರಚೋದಿಸುವ ವ್ಯಕ್ತಿಗಳ ಲೇಖನಗಳನ್ನು ಸೇರಿಸಲಾಗಿದೆ. ಈ ಕುರಿತಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ ಎಂದಿದ್ದಾರೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!
ಕನ್ನಡಿಗರು, ಹೆತ್ತವರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಕನ್ನಡದ ಹೆಮ್ಮೆಯ ಮತ್ತು ಅತ್ಯಂತ ಗೌರವಾನ್ವಿತ ರಾಷ್ಟ್ರಕವಿಗಳಾದ ಕುವೆಂಪುರವರ ಬಗ್ಗೆ ಅತ್ಯಂತ ಕೀಳಾಗಿ ಅಪಮಾನ ಮಾಡಲಾಗಿದೆ. ನಾಡಗೀತೆಗೆ ಅವಮಾನ ಮತ್ತು ಧ್ವಜವನ್ನು ಅಪಹಾಸ್ಯ ಮಾಡಿರುವ ಸಮಿತಿಯ ಅಧ್ಯಕ್ಷರ ಬಗ್ಗೆ ಜನರು ರೊಚ್ಚಿಗೆದ್ದಿದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್ಗೆ ಸಿದ್ದರಾಮಯ್ಯ ಚೆಕ್ – ಬಿಜೆಪಿಗೆ ಕುದುರುತ್ತಾ ಲಕ್?
ಸಮಿತಿಯ ಪಠ್ಯಪುಸ್ತಕಗಳಲ್ಲಿ ಬಾಬಾಸಾಹೇಬ ಅಂಬೇಡ್ಕರ್, ಬಸವಣ್ಣ, ಬುದ್ದ, ನಾರಾಯಣಗುರುಗಳು ಮತ್ತು ಸಾರಾ ಅಬೂಬಕರ್ ಅವರ ಪಾಠಗಳನ್ನು ತಿರುಚಲಾಗಿದೆ. ಇತಿಹಾಸಕ್ಕೆ ಕೋಮುದ್ವೇಷದ ಲೇಪ ಹಚ್ಚಲಾಗಿದೆ. ಶ್ರೀಮತಿ ಬಿ ಟಿ ಲಲಿತಾ ನಾಯಕ್ರವರ ಪದ್ಯವನ್ನು ಕಿತ್ತು ಹಾಕಲಾಗಿದೆ. ಕೋಮುವಾದ ಎಂದರೇನು? ಮುಸ್ಲಿಂ ಕೋಮುವಾದ ಎಂದು ಬಿಂಬಿಸಿದೆ. ಪ್ರಾದೇಶಿಕವಾದ ಎಂದರೆ ದೇಶದ್ರೋಹ ಅಂತ ಬಿಂಬಿಸಿದೆ ಎಂದಿದ್ದಾರೆ.
ಮಹಿಳೆಯರನ್ನು ಕೀಳಾಗಿ ಚಿತ್ರಿಸಿದ ಪಾಠ ಸೇರಿಸಲಾಗಿದೆ. ವಿದ್ಯಾ ರಂಗದ ಮೇಲೆ ಇತ್ತೀಚಿಗೆ ಅಸಂವಿಧಾನಿಕ ದಾಳಿ ಮತ್ತು ದಬ್ಬಾಳಿಕೆ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಮೌನ ಮತ್ತು ಬಹಿರಂಗವಾಗಿಯೇ ಮತೀಯ ದ್ವೇಷವನ್ನು ಹೊರಡುವವರನ್ನು ಸರ್ಕಾರ ನಿಗ್ರಹಿಸಿಲ್ಲ. ನಿಷ್ಕ್ರಿಯತೆಯಿಂದ ಕೆಲ ಸಾಹಿತಿಗಳು ಪುಸ್ತಕದಲ್ಲಿ ಅಳವಡಿಸಲು ನೀಡಿರುವ ಸಮ್ಮತಿಯನ್ನು ವಾಪಸು ಪಡೆದಿದ್ದಾರೆ. ಎಸ್ ಜಿ ಸಿದ್ದರಾಮಯ್ಯ, ಎಚ್ ಎಸ್ ರಾಘವೇಂದ್ರರಾವ್, ನಟರಾಜ ಬೂದಾಳು, ಚಂದ್ರಶೇಖರ್ ನಂಗ್ಲಿ, ಕೆ ಎಸ್ ಮಧುಸೂದನ್ ಸೇರಿದಂತೆ ಮುಂತಾದವರು ರಾಜ್ಯ ಸರ್ಕಾರದ ಸಮಿತಿಗೆ ರಾಜೀನಾಮೆ ಕೂಡ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ ಈರಪ್ಪ ಕಂಬ್ಳಿ ಶ್ರೀ ಚಂದ್ರಶೇಖರ ತಾಳ್ಯ ಮುಂತಾದವರು. ತಮ್ಮ ಲೇಖನಗಳನ್ನು ಪಠ್ಯದಲ್ಲಿ ಪುಸ್ತಕದಲ್ಲಿ ಅಳವಡಿಸಲು ನೀಡಿರುವ ಸಮ್ಮತಿಯನ್ನು ವಾಪಸ್ ಪಡೆದಿದ್ದಾರೆ. ವಿದ್ಯಾ ರಂಗಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಈ ಆತಂಕದ ವಿದ್ಯಮಾನಗಳನ್ನು ತಾವು ಆದ್ಯತೆಯ ಮೇಲೆ ಪರಿಗಣಿಸಬೇಕು. ಪಠ್ಯಪುಸ್ತಕ ಪರಿಷ್ಕೃತ ಸಮಿತಿಯನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು. ಹೊಸ ಪಠ್ಯ ಪುಸ್ತಕಗಳನ್ನು ಹಿಂಪಡೆದು ಹಳೆಯ ಪಠ್ಯಪುಸ್ತಕಗಳನ್ನು ಮುಂದುವರಿಸಿ ವಾತಾವರಣವನ್ನು ತಿಳಿಗೊಳಿಸಬೇಕು. ಈ ವಿಚಾರವಾಗಿ ಎಲ್ಲ ಕಡೆಯಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ ಎಂದಿದ್ದಾರೆ.