ಬೆಂಗಳೂರು ಗ್ರಾಮಾಂತರ: ಉತ್ತರ ಪ್ರದೇಶದ ಮಾದರಿಯಲ್ಲೇ ರಾಜ್ಯದಲ್ಲೂ ಬುಲ್ಡೋಜರ್ ಕಾನೂನು ಬಂದರೆ ಒಳ್ಳೆಯದು ಎಂದು ಕಂದಾಯ ಸಚಿವ ಆರ್.ಆಶೋಕ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಮಾತನಾಡಿದ ಅವರು, ಕೋಮುಗಲಭೆ ಸೃಷ್ಟಿಸುವವರನ್ನು ಬಂಧಿಸಿದರೆ ಒಂದು ವಾರಕ್ಕೆ ಜಾಮೀನು ತೆಗೆದುಕೊಂಡು ಆಚೆ ಬಂದು ಮತ್ತೆ ಅದೇ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಹುಬ್ಬಳ್ಳಿ ಗಲಭೆಯಲ್ಲಿ ಅರೆಸ್ಟ್ ಆದವರೆಲ್ಲ ರೌಡಿಶೀಟರ್ಗಳು. ಒಂದು ವಾರಕ್ಕೆ ಆಚೆ ಬಂದು ಮತ್ತೆ ಕಥೆ ಶುರು ಮಾಡಿದ್ದಾರೆ. ಹೀಗಾಗಿ ಅವರು ಬುದ್ಧಿ ಕಲಿಯಲ್ಲ. ಇಂತಹವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು. ಮನೆ-ಮಠ ಇಲ್ಲದ ಹಾಗೆ ಮಾಡಬೇಕು. ಆಗ ದಾರಿಗೆ ಬರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕುಂಕುಮ ಇಟ್ಟವರು ಯಾರು ಬಾಂಬ್ ಹಾಕಿಲ್ಲ, ಬಾಂಬ್ ಹಾಕೋರು ಟೋಪಿ ಹಾಕಿದವರು: ಸಿ.ಟಿ ರವಿ
ಜೈಲಿಗೆ ಹೋಗಿ ಬಂದವರು ಮತ್ತೆ ಅದೇ ಕೆಲಸ ಮಾಡ್ತಾರೆ. ಈ ತರಹದ ಮನಸ್ಥಿತಿ ಇರುವವರಿಗೆ ಉತ್ತರ ಪ್ರದೇಶ ಮಾದರಿಯ ಕಾನೂನು ಬರಬೇಕು. ಮುಸ್ಲಿಮರಲ್ಲಿ ಬಹಳ ಒಳ್ಳೆಯವರೂ ಇದ್ದಾರೆ. ಕೆಲ ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಈ ಕಾರ್ಯಾಚರಣೆ ಅವಶ್ಯಕವಾಗಿದ್ದು, ಸಿಎಂ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದರು.
ಕರ್ನಾಟಕದ ಚುನಾವಣಾ ಚಿತ್ರಣವೇ ಬದಲು
ಬಹುಸಂಖ್ಯಾತರನ್ನು ನಿರ್ಲಕ್ಷಿಸಿದ್ದೇ ಕಾಂಗ್ರೆಸ್ಗೆ ಮುಳುವಾಗಿದೆ. ಕಾಂಗ್ರೆಸ್ ಬರೀ ಅಲ್ಪಸಂಖ್ಯಾತರನ್ನು ಒಲೈಕೆ ಮಾಡುತ್ತೆ. ಆದರೆ ಇಂದು ಜನರಿಗೆ ಬೇಕಾಗಿರೋದು ಮೋದಿ ಸರ್ಕಾರ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಚುನವಣಾ ಪ್ರಚಾರ ಕಾರ್ಯ ಹಮ್ಮಿಕೊಂಡಿದೆ. ಆದರೆ ಕಾಂಗ್ರೆಸ್, ಜೆಡಿಎಸ್ನವರು ಇನ್ನೂ ತಡಕಾಡುತ್ತಲೇ ಇದ್ದಾರೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದ ಚಿತ್ರಣವೇ ಬದಲಾಗಲಿದೆ. ರಾಜ್ಯಕ್ಕೆ ಮೋದಿ, ಅಮಿತ್ ಶಾ, ನಡ್ಡಾ ಬಂದ ಮೇಲಂತೂ ಬಿಜೆಪಿಮಯವಾಗಲಿದೆ. ಆದರೆ ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಎಲ್ಲಿ ಹೋಗ್ತಾರೋ ಅಲ್ಲಿ ಸೋಲು ಆಗಲಿದೆ. ಹೀಗಾಗಿ ಕರ್ನಾಟಕಕ್ಕೂ ರಾಹುಲ್ ಗಾಂಧಿ ಬರಲೆಂದು ಆಶಿಸುವೆ ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಪೂರ್ವ ನಿಯೋಜಿತ ಸಂಚು, ನ್ಯಾಯಾಂಗ ತನಿಖೆ ನಡೆಯಲಿ: ಎಸ್ಡಿಪಿಐ
ರಾಜಸ್ಥಾನದಲ್ಲಿ ದೇವಾಲಯ ಕೆಡವಿರೋದು ಖಂಡನೀಯ
ರಾಜಸ್ಥಾನದಲ್ಲಿ 400 ವರ್ಷಗಳ ಇತಿಹಾಸ ಇರುವ ದೇವಾಲಯವನ್ನು ಬುಲ್ಡೋಜರ್ ಮೂಲಕ ಒಡೆದು ಹಾಕಿರುವುದು ಖಂಡನೀಯ. ರಾಜಸ್ಥಾನ ಸರ್ಕಾರ ದ್ವೇಷದಿಂದ ದೇವಾಲಯ ಕೆಡವಿ ಹಾಕಿದೆ. ರಾಜಸ್ಥಾನ ಸರ್ಕಾರ ಹಿಂದೂ ವಿರೋಧಿ ನೀತಿ ತಾಳಿದೆ. ಇದು ಹಿಂದೂಗಳಿಗೆ ಬಹಳ ನೋವು ತಂದಿದೆ ಎಂದು ಖಂಡನೆ ವ್ಯಕ್ತಪಡಿಸಿದರು.