ಬೆಳಗಾವಿ: ಯಾವುದೇ ಕಾರಣಕ್ಕೂ ಈಶ್ವರಪ್ಪನವರು ರಾಜೀನಾಮೆ ಕೊಡಬಾರದು ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ ಪರ ಸಚಿವ ಮುರುಗೇಶ್ ನಿರಾಣಿ ಬ್ಯಾಟಿಂಗ್ ಮಾಡಿದ್ದಾರೆ.
ನಗರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ನಲ್ಲಿ ಸಚಿವ ಈಶ್ವರಪ್ಪ ಮೇಲೆ ಬಂದಿರೋ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ನವರು ಈಶ್ವರಪ್ಪ ಅವರ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಟೆಂಡರ್ಗೆ ಅದರದೇ ಆದ ಪ್ರಕ್ರಿಯೆ ಇದೆ. ಜಾಹೀರಾತು ನೀಡುವುದು, ಸರ್ಕಾರ ಆರ್ಡರ್ ಮಾಡೋದು ಹೀಗೆ ಹಲವು ಪ್ರಕ್ರಿಯೆಗಳಿವೆ. ಈ ಕೇಸ್ನಲ್ಲಿ ಇದ್ಯಾವುದೂ ನಡೆದೇ ಇಲ್ಲ. ಕಾಂಗ್ರೆಸ್ನವರು ಈಶ್ವರಪ್ಪ ಮೇಲೆ ಮಾಡುತ್ತಿರುವ ಆಪಾದನೆ ರಾಜಕೀಯ ಪ್ರೇರಿತವಾಗಿದೆ. ಯಾವುದೇ ಕಾರಣಕ್ಕೂ ಈಶ್ವರಪ್ಪನವರು ರಾಜೀನಾಮೆ ಕೊಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ಮುಜುಗರ ತರಿಸಲ್ಲ, ರಾಜೀನಾಮೆ ಕೊಡ್ತೀನಿ: ಈಶ್ವರಪ್ಪ
ಸಚಿವ ಈಶ್ವರಪ್ಪ ವಿರುದ್ಧ ಯಾವುದೇ ಸಾಕ್ಷಿ ಇಲ್ಲದೇ ಆಪಾದನೆ ಮಾಡುವುದು ಸರಿಯಲ್ಲ. ಯಾರೋ ಒಬ್ಬರು ಬಂದು ಆಪಾದನೆ ಮಾಡಿದ ತಕ್ಷಣ ಈ ರೀತಿ ಲಿಂಕ್ ಮಾಡೋದು ಸರಿಯಲ್ಲ. ಸಂತೋಷ್ ನಮ್ಮ ಕಾರ್ಯಕರ್ತ ಇರಬಹುದು. ಸಾಕಷ್ಟು ಜನ ಇರ್ತಾರೆ. ಆದರೆ ಇಷ್ಟು ಹಣ ಕೊಡುವುದಿತ್ತು ಅಂತ ಹೇಳುವುದು ಸರಿಯಲ್ಲ. ತನಿಖೆ ವೇಳೆ ಸತ್ಯಾಸತ್ಯತೆ ತಿಳಿಯುತ್ತದೆ. ಪೊಲೀಸರು ತನಿಖೆ ಮಾಡಿ ರಿಪೋರ್ಟ್ ಸಲ್ಲಿಸುತ್ತಾರೆ. ತನಿಖೆ ವೇಳೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.