ಬೆಂಗಳೂರು: ಕೆಪಿಎಸ್ಸಿಗೆ ಕಾಯಕಲ್ಪ ಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಶೂನ್ಯವೇಳೆಯಲ್ಲಿ ಕಾಂಗ್ರೆಸ್ನ ರವಿ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ನೇಮಕಾತಿ ಪೂರ್ಣ ಮಾಡಲು ಏನು ಪ್ರಕ್ರಿಯೆ ನಡೆಯುತ್ತಿದೆ? ಎಂದು ಪ್ರಶ್ನೆ ಮಾಡಿದರು.
ಕೆಪಿಎಸ್ಸಿಯಲ್ಲಿ 517 ಕ್ರಮಬದ್ಧವಾದ ಪ್ರಸ್ತಾವನೆ ಸಲ್ಲಿಕೆ ಆಗಿದೆ. 25 ಸಾವಿರ ಹುದ್ದೆಗಳಿಗೆ 45 ಅಧಿಸೂಚನೆ ಹೊರಡಿಸಲಾಗಿದೆ. 17 ಸಾವಿರ ನೇಮಕಾತಿಗಳು ನೆನೆಗುದಿಗೆ ಬಿದ್ದಿದೆ. ಕೆಪಿಎಸ್ಸಿಯಲ್ಲಿ ಸರಿಯಾಗಿ ನೇಮಕಾತಿ ಪ್ರಕ್ರಿಯೆ ಆಗುತ್ತಿಲ್ಲ. ಹೀಗಾಗಿ ಕೆಪಿಎಸ್ಸಿ ರದ್ದು ಮಾಡುವುದು ಸೂಕ್ತ ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು
ಈ ಕುರಿತು ಉತ್ತರ ನೀಡಿದ ಸಿಎಂ, ಕಳೆದ ಹಲವಾರು ವರ್ಷಗಳಿಂದ ಆರ್ಥಿಕ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಖಾಲಿ ಹುದ್ದೆಗಳ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅನೇಕ ಇಲಾಖೆಗಳಿಗೆ ನೇಮಕ ಮಾಡಿಕೊಳ್ತಿದ್ದೇವೆ. 16 ಸಾವಿರ ಪೊಲೀಸರ ನೇಮಕಾತಿ, 15 ಸಾವಿರ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ 14 ಸಾವಿರ ಪೋಸ್ಟ್ ನೇಮಕಾತಿ ಮಾಡ್ತಿದ್ದೇವೆ. ಕೆಲವು ವರ್ಷಗಳಲ್ಲಿ ಖಾಲಿ ಇರೋ ಹುದ್ದೆ ಭರ್ತಿ ಮಾಡುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಕೆಪಿಎಸ್ಸಿಯಲ್ಲಿ ಎರಡು ಮೂರು ಸಮಸ್ಯೆ ಇದೆ. ಇನ್ನಷ್ಟು ಸಿಬ್ಬಂದಿ ಅಲ್ಲಿಗೆ ಒದಗಿಸಬೇಕು. ಕಂಟ್ರೋಲರ್ ನೇಮಕ ಕೂಡ ಆಗಬೇಕು. ಶೀಘ್ರವೇ ಅವುಗಳ ನೇಮಕಾತಿ ಮಾಡುತ್ತೇವೆ. ಕೆಪಿಎಸ್ಸಿಯನ್ನ ಸಂಪೂರ್ಣವಾಗಿ ಕಾಯಕಲ್ಪ ಮಾಡುವ ಅಗತ್ಯವಿದೆ. ಇಲ್ಲಿ ರಿಸಲ್ಟ್ ಬಂದ ಮೇಲೆ ತಕರಾರು ಬರುತ್ತದೆ ಎಂದು ಮುಂದಾಗುವ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಇಂಟರ್ ವ್ಯೂ ಆದ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಹೀಗಾಗಿ ನೇಮಕಾತಿ ವಿಳಂಬ ಆಗುತ್ತಿದೆ. ಕೆಪಿಎಸ್ಸಿಗೆ ಕಾಯಕಲ್ಪ ಕೊಡಲು ಈಗಾಗಲೇ ಕೆಲ ಸಭೆ ಮಾಡಿದ್ದೇನೆ. ಸಂದರ್ಶನದ ಅಂಕಗಳನ್ನು ಕಡಿತ ಮಾಡಲಾಗಿದೆ. ಆದಷ್ಟು ಬೇಗ ಕೆಪಿಎಸ್ಗೆ ಹೊಸ ರೂಪ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ