ಚಿಕ್ಕೋಡಿ: ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಆಭರಣ ಮತ್ತು ನಗದು ಇರುವ ಬ್ಯಾಗನ್ನು ವೃದ್ಧ ಅದರ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳಾಗಡ್ಡಿ ಖಾನಾಪೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯಿಂದ ಕೊಲ್ಲಾಪುರದ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ಕೊಲ್ಲಾಪುರದ ಸುವರ್ಣಾ ಸುಭಾಷ್ ಚೌಗಲೆ ಅವರ ಬ್ಯಾಗ್ ಆಕಸ್ಮಿಕವಾಗಿ ರಾಷ್ಟ್ರೀಯ ಹೆದ್ದಾರಿ ಉಳ್ಳಾಗಡ್ಡಿ ಖಾನಾಪುರ ಕ್ರಾಸ್ ಬಳಿ ಬಿದ್ದಿತ್ತು. ಅದನ್ನು ಗಮನಿಸಿದ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ವೃದ್ಧ ಮುತ್ಯಪ್ಪಾ ಹಾಲಪ್ಪಾ ಹಾಲಾಬಗೋಳ ಬ್ಯಾಗ್ ತೆಗೆದುಕೊಂಡು ಅವರನ್ನು ಕೂಗಿದ್ದಾರೆ. ಆದರೆ ಹೆದ್ದಾರಿ ರಸ್ತೆಯಲ್ಲಿ ಚಲಿಸುತ್ತಿದ ಬೈಕ್ ವೇಗ ಹೆಚ್ಚಿದ್ದರಿಂದ ಸುವರ್ಣಾ ಸುಭಾಷ್ ಚೌಗಲೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್
40 ಗ್ರಾಂ. ಬಂಗಾರ ಹಾಗೂ 5 ಸಾವಿರ ರೂ. ಮತ್ತು ಕಾಗದ ಪತ್ರವಿದ್ದ ಬ್ಯಾಗ್ ಬಿದ್ದಿದ್ದು, ಕೊಲ್ಲಾಪುರಕ್ಕೆ ತೆರಳಿದ ನಂತರ ಬ್ಯಾಗ್ ಬಗ್ಗೆ ಅರಿವಾದ ತಕ್ಷಣ ಸುವರ್ಣಾ ಅವರು ಬ್ಯಾಗಿನೊಳಗಿದ್ದ ತಮ್ಮ ಮೊಬೈಲ್ಗೆ ಕರೆ ಮಾಡಿದ್ದಾರೆ. ಈ ವೇಳೆ ಕರೆ ಸ್ವೀಕರಿಸಿದ ವೃದ್ಧನ ಮಗ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಸುವರ್ಣಾ ಅವರಿಗೆ ಸ್ವತಃ ವೃದ್ಧ ಮುತ್ಯಪ್ಪಾ ಹಾಗೂ ಮಗ ಬಂದು ಬ್ಯಾಗ್ ಹಿಂದಿರುಗಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಸುವರ್ಣಾ ಅವರು ಹಣ ಕೊಡಲು ಮುಂದಾದಾಗ ನಿರಾಕರಿಸಿದ ವೃದ್ಧ, ನಿಮ್ಮ ದುಡ್ಡು ನಮಗೆ ಬೇಡ ಎಂದಿದ್ದಾರೆ. ಇದನ್ನು ಗಮನಿಸಿದ ಕೊಲ್ಲಾಪುರದ ಸುವರ್ಣಾ ಅವರು ಕರ್ನಾಟಕದ ಜನರು ಪ್ರಾಮಾಣಿಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ: ಗೋಕಾಕ್ ಅಭಿವೃದ್ಧಿ ಆಗಿಲ್ಲವೆಂದ್ರೆ ಸ್ಥಳದಲ್ಲೇ ರಾಜೀನಾಮೆ ಕೊಡುತ್ತೇನೆ: ಸವಾಲು ಹಾಕಿದ ರಮೇಶ್ ಜಾರಕಿಹೊಳಿ