ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೋರಖ್ಪುರ್ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸ್ಪರ್ಧಿಸಲಿದ್ದಾರೆ.
ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ನಡೆಯುವ ಚುನಾವಣೆಯಲ್ಲಿ ಗೋರಖ್ಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ದಲಿತ ನಾಯಕ ಚಂದ್ರಶೇಖರ್ ಆಜಾದ್ ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಗೋರಖ್ಪುರದಲ್ಲಿ ಸ್ಪರ್ಧಿಸಲಿದ್ದಾರೆಂದು ಬಿಜೆಪಿ ಘೋಷಿಸಿತ್ತು. ಅದಾದ ಬಳಿಕ ಭೀಮ್ ಆರ್ಮಿ ಪಕ್ಷ ಆಜಾದ್ ಸ್ಪರ್ಧೆ ವಿಚಾರವನ್ನು ತಿಳಿಸಿದೆ. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ
ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ (ಎಸ್ಪಿ) ಅಭ್ಯರ್ಥಿಯಾಗಿರುತ್ತಾರೆ. ಆದರೆ ಎಸ್ಪಿ ಈ ಕ್ಷೇತ್ರದಲ್ಲಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ದಲಿತ ನಾಯಕ ಚಂದ್ರಶೇಖರ್ ಆಜಾದ್ಗೂ ಕೂಡ ಇದು ಮೊದಲ ಚುನಾವಣೆಯಾಗಿದೆ.
34 ವಯಸ್ಸಿನ ಆಜಾದ್, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿ ಸುದ್ದಿಯಾಗಿದ್ದರು. ನಂತರ ಚುನಾವಣೆಯಿಂದ ಹಿಂದೆ ಸರಿದರು. ಆ ಸಮಯದಲ್ಲಿ ತನಗೆ ಯಾವುದೇ ಪಕ್ಷವಿಲ್ಲದ ಕಾರಣ ಮಾಯಾವತಿ ಅವರ ಬಿಎಸ್ಪಿ ಹಾಗೂ ಕಾಂಗ್ರೆಸ್ಗೆ ಬೆಂಬಲ ನೀಡುವುದು ಉತ್ತಮ ಎಂದು ತಿಳಿಸಿದ್ದರು. ಇದನ್ನೂ ಓದಿ: ಚರಣ್ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್
ಸಿಎಂ ವಿರುದ್ಧ ಗೋರಖ್ಪುರದಲ್ಲಿ ಕಣಕ್ಕಿಳಿಯುವ ಸಂಬಂಧ ಪ್ರತಿಕ್ರಿಯಿಸಿರುವ ಆಜಾದ್, ನನಗೆ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ಆದರೆ ಯೋಗಿ ಆದಿತ್ಯನಾಥ್ ಅವರನ್ನು ಸೋಲಿಸುವುದು ಮುಖ್ಯ. ಹೀಗಾಗಿ ಅವರು ಎಲ್ಲೆಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ನಾನೂ ಸ್ಪರ್ಧಿಸುತ್ತೇನೆ ತಿಳಿಸಿದ್ದಾರೆ.
ಗೋರಖ್ಪುರ ಅಥವಾ ಪೂರ್ವ ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿ ಪಕ್ಷ ಯಾವುದೇ ನೆಲೆಯನ್ನು ಹೊಂದಿಲ್ಲ. ಈ ಕ್ಷೇತ್ರ 1989ರಿಂದಲೂ ಬಿಜೆಪಿ ತೆಕ್ಕೆಯಲ್ಲಿದೆ. ಒಮ್ಮೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಹೊರತುಪಡಿಸಿದರೆ, ಇಲ್ಲಿ ಬಿಜೆಪಿ ಪ್ರಬಲವಾಗಿದೆ.