ಕೊಪ್ಪಳ: ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ.
ಮಹಿಳಾ ಅಧಿಕಾರಿ ಮತ್ತು ಕನಕಗಿರಿ ಶಾಸಕರ ಆಡಿಯೋ ವಿಚಾರವಾಗಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ನಾನು ಈ ಪ್ರಕರಣದ ಬಗ್ಗೆ ಏನೂ ಮಾತನಾಡುವುದಿಲ್ಲ. ಯಾರಿಗೆ ಅನ್ಯಾಯವಾಗಿದೆ ಅವರು ನಮ್ಮ ಸಹಾಯ ಕೇಳಿದರೆ ಅದರ ಬಗ್ಗೆ ನಾನು ಮಾತನಾಡುತ್ತೇನೆ. ಶಾಸಕರ ಬಗ್ಗೆ ನಾನು ಮಾತನಾಡುವ ಅವಶ್ಯಕತೆ ಇಲ್ಲ. ಅದು ಹಿಟ್ ವಿಕೆಟ್, ತನ್ನಷ್ಟಕ್ಕೆ ತಾನೇ ಔಟ್ ಆಗುವ ಕ್ಯಾಂಡಿಡೇಟ್. ಅನ್ಯಾಯವಾದವರು ನಮ್ಮನ್ನು ಸಂಪರ್ಕ ಮಾಡಿದರೆ, ಕಾಂಗ್ರೆಸ್ ಪಕ್ಷ, ವೈಯ್ಯಕ್ತಿಕವಾಗಿ ನಿಂತು ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!
ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ. ಈ ವಿಷಯದ ಬಗ್ಗೆ ರಾಜ್ಯಾಧ್ಯಕ್ಷರು ಸ್ಪಷ್ಟನೆ ಕೇಳಬೇಕಿತ್ತು. ಈ ಪ್ರಕರಣ ಕನಕಗಿರಿ ಕ್ಷೇತ್ರಕ್ಕೆ ಒಂದು ಕಪ್ಪುಚುಕ್ಕೆ ಇದ್ದಂತೆ. ಈ ಪ್ರಕರಣದ ಬಗ್ಗೆ ಬಿಜೆಪಿ ಶಾಸಕ ಬಸವರಾಜ ದಡೇಸೂಗುರ್ ಅವರನ್ನು ಕೇಳಬೇಕು. ಪೊಲೀಸ್ ಸ್ಟೇಶನ್ಗಳು ಬಿಜೆಪಿಯ ಸೆಟ್ಲ್ಮೆಂಟ್ ಸ್ಟೇಶನ್ಗಳಾಗಿವೆ ಎಂದು ಟಾಂಗ್ ನೀಡಿದರು.
ಅಯೋಧ್ಯೆ ಮಾದರಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಂಜನಾದ್ರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲಿ. ನಾವು ಅದನ್ನು ಸ್ವಾಗತ ಮಾಡುತ್ತೇವೆ. ಅದರ ಹೆಸರಿನಲ್ಲಿ ರಾಜಕಾರಣ ಮಾಡಲು ಹೋದರೆ ನಮ್ಮಲ್ಲಿ ನಡೆಯುವದಿಲ್ಲ. ಕರ್ನಾಟಕದ ಜನರು ಜಾಣರಿದ್ದಾರೆ. ಬಿಜೆಪಿಗೆ ಸಹಾಯ ಮಾಡುವರನ್ನು ಕೊಲ್ಲುವುದೇ ಬಿಜೆಪಿ ಅವರ ಕೆಲಸ ಎಂದರು. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್ನಲ್ಲಿ 20 ನಿಮಿಷ ಸಿಲುಕಿದ ಮೋದಿ
ಮೇಕೆದಾಟು ಯೋಜನೆ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಪಾದಯಾತ್ರೆಯಿಂದ ಬಿಜೆಪಿ ಯವರಿಗೆ ಒಂದು ನಡುಕ ಆರಂಭವಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದೆಡೆಗೆ ವಾಲಿದ್ದಾರೆ ಎನ್ನುವ ನಡುಕ ಆರಂಭವಾಗಿದೆ. ಕೊರೊನಾ ಬಂದಾಗ ಚುನಾವಣೆ, ಜನಾಶೀರ್ವಾದ ಯಾತ್ರೆ ಮಾಡುತ್ತಾರೆ. ಬಿಜೆಪಿ ಅವರು ಯಾತ್ರೆ ಮಾಡಿದರೆ ಕೊರೊನಾ ಬರೋಲ್ಲ. ಕಾಂಗ್ರೆಸ್ನವರು ಪಾದಯಾತ್ರೆ ಮಾಡಿದರೆ ಕೊರೊನಾ ಬರುತ್ತದೆ. ಕೊವೀಡ್ ನಿಯಮಗಳನ್ನು ಪಾಲನೆ ಮಾಡಿ ಪಾದಯಾತ್ರೆ ಮಾಡುತ್ತೇವೆ. ಯಾರು ಏನೇ ಹೇಳಿದರೂ ಪಾದಯಾತ್ರೆ ನಿಲ್ಲುವುದಿಲ್ಲ. ನಾನೂ ಸಹ ಪಾದಯಾತ್ರೆಯಲ್ಲಿ ಪಾಲ್ಗೋಳ್ಳುತ್ತೇನೆ ಎಂದು ನುಡಿದರು.