ಬೆಂಗಳೂರು: ನಗರದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದು ಕಡೆ ಮಳೆ ಸಮಸ್ಯೆಯಾದರೆ ಮತ್ತೊಂದೆಡೆ ರಾಜಕಾಲುವೆ ಒಡೆದು ರಸ್ತೆಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ.
ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ಅಮಾನಿಕೆರೆಯ ನೀರು ತುಂಬಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಈ ಅಪಾರ್ಟ್ಮೆಂಟ್ ಜಲಾವೃತಗೊಂಡಿದೆ. ಅಲ್ಲದೇ ಕಾರು, ಬೈಕ್ಗಳು ಕೂಡ ಮುಳುಗಡೆ ಆಗಿವೆ. ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ, ನಾಗಸಂದ್ರ, ರುಕ್ಮಿಣಿ ಬಡಾವಣೆ, ಗುಂಡಪ್ಪ ಬಡಾವಣೆ, ಬೆಲ್ಮರ್ ಬಡಾವಣೆ, ರಾಯಲ್ ಎನ್ಕ್ಲೇವ್, ಬಿಟಿಎಸ್ ಬಡಾವಣೆಯಲ್ಲಿ ನೀರು ನುಗ್ಗಿದ್ದು, ಚಿಕ್ಕಬಾಣಾವರದಲ್ಲಿ ಬೈಕ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್ಸೈಟ್ನಲ್ಲಿ ಚೆಕ್ ಮಾಡಿ
ಯಶವಂತಪುರದ ಮೋಹನ್ಕುಮಾರ್ ನಗರದಲ್ಲಿ ಕಾಂಪೌಂಡ್ ಗೋಡೆ ಕುಸಿದು ಎರಡು ಆಟೋ, ಬೈಕ್ ಜಖಂಗೊಂಡಿದ್ದು, ಯಶವಂತಪುರದ ಆಂಜನೇಯ ದೇವಸ್ಥಾನಕ್ಕೂ ಸಹ ನೀರು ನುಗ್ಗಿದೆ. ಅಲ್ಲದೇ ಬಿಡಿಎ ಕಚೇರಿ ಸಮೀಪದ ಅಂಡರ್ಪಾಸ್ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ವಿದ್ಯಾರಣ್ಯಪುರದ ವೆಂಕಟಸ್ವಾಮಪ್ಪ ಬಡಾವಣೆಯ ರಸ್ತೆ, ಅಂಗಡಿ, ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಈ ಕುರಿತಂತೆ `ಶಾಸಕರು, ಅಧಿಕಾರಿಗಳಿಗೆ ಫೋನ್ ಮಾಡಿದರೆ ಇಂದು ಭಾನುವಾರ ನಾವು ಬರಲ್ಲ ಅಂತ ಹೇಳುತ್ತಾರೆ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಯಲಹಂಕದ ಅಂಡರ್ಪಾಸ್ನಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು ಮತ್ತು ಮೂರ್ನಾಲ್ಕು ಬಿಎಂಟಿಸಿ ಬಸ್ ಸಿಲುಕಿ ಕೊನೆಗೆ ಅಂಡರ್ಪಾಸ್ನಲ್ಲಿ ಸಂಚಾರ ಬಂದ್ ಮಾಡಲಾಯಿತು. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್