ಚಿತ್ರದುರ್ಗ: ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚಲು ಹಾಗೂ ದೇಶ ಹಿಂದುಳಿಯಲು ಕಾಂಗ್ರೆಸ್ ಪಕ್ಷ ಕಾರಣವೆಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನೂತನ ಪ್ರವಾಸಿ ಮಂದಿರ ಉದ್ಘಾಟನೆಗೂ ಮುನ್ನ ಮಾತನಾಡಿದ ಅವರು, ಈ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉದ್ಭವಿಸಲು ಕಾಂಗ್ರೆಸ್ ಕಾರಣವಾಗಿದ್ದು, ದೇಶ ಪಾತಾಳಕ್ಕೆ ಹೋಗಲು ಕೂಡ ಕಾಂಗ್ರೆಸ್ ಕಾರಣವೆಂದು ಆರೋಪಿಸಿದ್ದಾರೆ.
ಇದೇ ವೇಳೆ ಕುಮಾರವ್ಯಾಸರ ನುಡಿ ಉಲ್ಲೇಖಿಸಿ ಸಿದ್ದರಾಮಯ್ಯ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಪಕ್ಷ ವಿಸರ್ಜಿಸಲು ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟರು ಹಾಗೂ ಲೂಟಿ ಕೋರರಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ತೊಲಗಿಸಿ ಎಂದು ಗಾಂಧೀಜಿ ಹೇಳಿದ್ದರು. ಹೀಗಾಗಿ ಕುಮಾರವ್ಯಾಸರ ನುಡಿ ನಮಗೆ ಅನ್ವಯಿಸಲ್ಲ. ನೀವು ಗಾಂಧೀಜಿ ಮಾತು ನೆನೆಪುಸಿಕೊಳ್ಳಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
2023ಕ್ಕೆ ನಮ್ಮ ಮನೆ ಬಾಗಿಲಿಗೆ ಎಲ್ಲಾ ಪಕ್ಷಗಳು ಬರಬೇಕಾಗುತ್ತದೆ ಎಂದು ದೇವೇಗೌಡರ ಹೇಳಿಕೆ ಕುರಿತಂತೆ, ದೇವೇಗೌಡರು, ಜೆಡಿಎಸ್ ಹಾಗೂ ಹೆಚ್ಡಿಕೆ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಅವರೊಂದಿಗೆ ಹೋಗುವ ವಿಚಾರವನ್ನು ನಮ್ಮ ರಾಷ್ಟ್ರೀಯ ನಾಯಕರು ಮುಂದೆ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಕೂಡದೆಂಬ ಸ್ಪಷ್ಟತೆಯಿದೆ. ಆಗ ಅಂತಹ ಸಂದರ್ಭ ಬಂದರೆ ದೇವೇಗೌಡರನ್ನು ಕೇಳುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದ ಬಳಿ ಭೂಕುಸಿತ ಪ್ರಕರಣ – ರಸ್ತೆ ಮರು ನಿರ್ಮಾಣಕ್ಕೆ 80 ಲಕ್ಷ ಮಂಜೂರು
ಸಮಯ ಬಂದಾಗ, ಯಾರು ಯಾರ ಮನೆಗೆ ಹೋಗಬೇಕೆಂಬ ತೀರ್ಮಾನವನ್ನು ನಮ್ಮ ಹೈಕಮಾಂಡ್ ಕೈಗೊಳ್ಳುತ್ತದೆ. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಭರವಸೆ ನಮಗಿದ್ದೂ, ಅದಕ್ಕೆ ದಿಕ್ಸೂಚಿ ಎಂಬಂತೆ ನಗರ ಪಾಲಿಕೆ ಚುನಾವಣೆಯ ಫಲಿತಾಂಶ ನಮ್ಮ ಮುಂದೆ ಇದೆ. ಆದ್ದರಿಂದ ಇಂದಿನ ಆರ್ಥಿಕತೆ, ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಕರ್ಮಕಾಂಡ ಕಾರಣವೆಂದು ಮತ್ತೆ ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಸಾಹಸ ಸಿಂಹನ 71ನೇ ಹುಟ್ಟುಹಬ್ಬ ಆಚರಣೆ
ಎಲ್ಲೆಡೆ ಅನಧಿಕೃತ ದೇಗುಲಗಳ ನೆಲಸಮ ವಿಚಾರವಾಗಿಯೂ ಮಾತನಾಡಿದ ಅವರು, ನಮ್ಮ ಗಮನಕ್ಕೆ ಬಾರದೇ ಇಂತಹ ಘಟನೆಗಳು ನಡೆದಿವೆ. ಈ ವಿಚಾರದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರಿಗೆ ಶಿಕ್ಷೆ ನೀಡುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಅಲ್ಲದೇ ದೇಶದಲ್ಲಿ ಇಂಧನ ದರ ಏರಿಕೆ ಅಂತ ಕಾಂಗ್ರೆಸ್ ನವರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಡೀಸೆಲ್, ಪೆಟ್ರೋಲ್ ದರ ಏರಿಕೆ ಬಗ್ಗೆ ಕಾಂಗ್ರೆಸ್ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಬೇಕು. ಅದರ ಬದಲಾಗಿ ಕಾಂಗ್ರೆಸ್ ಸರ್ಕಾರವಿರುವ ಎಲ್ಲಾ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲಿ ಅಂತ ಒತ್ತಾಯಿಸಿದರು. ಜೊತೆಗೆ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವ ನಿಟ್ಟಿನಲ್ಲೂ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.