ಮೈಸೂರು: ಅರಮನೆ ನಗರಿಯನ್ನು ಬೆಚ್ಚಿ ಬೀಳಿಸಿದ್ದ ದರೋಡೆ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಬಾಂಬೆ ಬುಡ್ಡಾನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೈಸೂರಿನ ಚಿನ್ನದಂಗಡಿಯಲ್ಲಿ ನಡೆದಿದ್ದ ದರೋಡೆ, ಶೂಟ್ಔಟ್ ಪ್ರಕರಣ ಮಾತ್ರವಲ್ಲದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ದರೋಡೆಕೋರ ಮುದುಕನನ್ನು ಇದೀಗ ಬಂಧಿಸಲಾಗಿದೆ. ಈ ಮೂಲಕ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಮುದುಕನನ್ನು ಮೈಸೂರು ಖಾಕಿ ಪಡೆ ಬಂಧಿಸಿದಂತಾಗಿದೆ. ಇದನ್ನೂ ಓದಿ: ಕೋವಿಡ್ಗೂ ಮೊದಲು ಬಂದಿದ್ದ ನಿಫಾ ವೈರಸ್ಗೆ ಕೇರಳದಲ್ಲಿ 12ರ ಬಾಲಕ ಬಲಿ
60 ವರ್ಷದ ವೃದ್ಧ ದರೋಡೆಕೋರನ ಸೆರೆಗಾಗಿ ಮೈಸೂರು ಪೊಲೀಸರು ಬಾಂಬೆಯಲ್ಲಿ ಬೀಡುಬಿಟ್ಟಿದ್ದರು. ಬಾಂಬೆಯಲ್ಲಿ ಅಡಗಿದ್ದ ಬುಡ್ಡಾ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಪೊಲೀಸರು ಎಲ್ಲ ದರೋಡೆಕೋರರ ಹೆಡೆಮುರಿ ಕಟ್ಟಿದ್ದು, ಪ್ರಕರಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯನ್ನು ಸೆರೆ ಹಿಡಿದು ದರೋಡೆ ಶೂಟೌಟ್ ಪ್ರಕರಣಕ್ಕೆ ಪೊಲೀಸರು ತಿಲಾಂಜಲಿ ಹಾಡಿದ್ದಾರೆ.
ಆಗಸ್ಟ್ 23 ರಂದು ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ನಲ್ಲಿ ದರೋಡೆ ಹಾಗೂ ಶೂಟೌಟ್ ಘಟನೆ ನಡೆದಿತ್ತು. ಡಕಾಯಿತರು ದರೋಡೆ ಮಾಡಿ ಶೂಟ್ಔಟ್ ಮಾಡಿದ್ದರು. ಈ ವೇಳೆ ದಡದಹಳ್ಳಿ ಚಂದ್ರು ಮೃತಪಟ್ಟಿದ್ದರು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಸಚಿವರ ಜಿಲ್ಲೆಯಲ್ಲೇ ಇಲ್ಲ ಸಿಟಿ ಬಸ್- ವಿದ್ಯಾರ್ಥಿಗಳು, ಕಾರ್ಮಿಕರ ಪರದಾಟ
ಚಿನ್ನದಂಗಡಿಯಲ್ಲಿ ನಡೆದ ದರೋಡೆ ಶೂಟ್ಔಟ್ ಪ್ರಕರಣದಲ್ಲಿ 2 ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ಕಳ್ಳತನವಾಗಿತ್ತು. ದರೋಡೆ ಮಾಡಿದವರಲ್ಲಿ ವೃದ್ಧನ ಪಾತ್ರ ಹಾಗೂ ಚಿನ್ನಾಭರಣದ ಪ್ರಮಾಣ ಸಿಂಹಪಾಲಿದೆ. ಈ 60 ವರ್ಷದ ವೃದ್ಧನ ಬಳಿಯೇ 1 ಕೆ.ಜಿ.ಗೂ ಹೆಚ್ಚು ಚಿನ್ನಾಭರಣವಿದೆ ಎನ್ನಲಾಗಿತ್ತು.
20 ವರ್ಷದವನಿದ್ದಾಗಲಿಂದಲೂ ಆಭರಣ ಕಳ್ಳತನದಲ್ಲಿ ಪರಿಣಿತಿ ಹೊಂದಿರುವ ವೃದ್ಧ, ಬಾಂಬೆ ಬುಡ್ಡಾ ಅಂತಲೇ ಕುಖ್ಯಾತಿ ಹೊಂದಿದ್ದಾನೆ. ಹೀಗಾಗಿ ಈತನ ಪತ್ತೆಗೆ ಮೈಸೂರು ಪೊಲೀಸರು ಮುಂಬೈಗೆ ತೆರಳಿದ್ದರು.