ವಸತಿ ಶಾಲೆ ಸೀಟು ನೀಡಲು ಲಂಚ ಕೇಳಿದ ಪ್ರಾಂಶುಪಾಲ ACB ಬಲೆಗೆ

Public TV
1 Min Read
CTD ACB

ಚಿತ್ರದುರ್ಗ: ವಸತಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗೆ ಸೀಟು ನೀಡಲು ಲಂಚ ಕೇಳಿದ್ದ ಪ್ರಾಂಶುಪಾಲನೋರ್ವ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಮೊರಾರ್ಜಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಸೈಯದ್ ನಿಜಾಮುದ್ದೀನ್ ಎಸಿಬಿ ಬಲೆಗೆ ಬಿದ್ದ ವಿವಿಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ. ಸೈಯದ್ ನಿಜಾಮುದ್ದೀನ್ ಬಳಿ ಹಿರಿಯೂರು ತಾಲೂಕಿನ ಬೆಳಘಟ್ಟ ಗ್ರಾಮದ ಎಚ್.ಮೂರ್ತಿ ಅವರ ಪುತ್ರ ಎಂ.ಯಲ್ಲಪ್ಪನನ್ನು ವಿವಿಪುರ ಮೊರಾರ್ಜಿ ಶಾಲೆಗೆ ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದರು. ನಿಮ್ಮ ಪುತ್ರನಿಗೆ ಮೊರಾರ್ಜಿ ಶಾಲೆ ಸೇರ್ಪಡೆ ಒಂದು ಅಂಕ ಕಡಿಮೆ ಇದ್ದು 10 ಸಾವಿರ ರೂ. ನೀಡಿದರೆ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದನು. ನಿಜಾಮುದ್ದೀನ್ ವರ್ತನೆ ವಿರುದ್ಧ ಎಚ್.ಮೂರ್ತಿ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ದೂರು ನೀಡಿದ್ದರು. ಉಪಾಯದಿಂದ ಈಗ ಹಣವಿಲ್ಲ. ಸೀಟು ನೀಡಿದ ಬಳಿಕ ಹಣ ನೀಡುವುದಾಗಿ ನಂಬಿಸಿ ಇಂದು ಹಣವನ್ನು ತಂದು ನಿಜಾಮುದ್ದೀನ್ ಗೆ ನೀಡುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೂರ್ತಿ ಅವರ ದೂರು ಆಧರಿಸಿ ಎಸಿಬಿ ಅಧೀಕ್ಷಕ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವರಾಜ್ ಮುಗದಮ್ ಹಾಗೂ ಪಿಐ ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಪ್ರಾಂಶುಪಾಲ ಸೈಯದ್ ನಿಜಾಮುದ್ದೀನ್ ನನ್ನು ಬಂಧಿಸಿದೆ.

Share This Article
Leave a Comment

Leave a Reply

Your email address will not be published. Required fields are marked *