ತುಮಕೂರು: ರಾಜ್ಯವನ್ನು ಉಳಿಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ತೆಗೆಯಬೇಕು ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಎಡವಟ್ಟು ಮಾಡಿದ್ದಾರೆ.
ನಗರದಲ್ಲಿ ನಡೆದ ಐದು ಜಿಲ್ಲೆಗಳ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಾಯಿ ತಪ್ಪಿ ಎರಡು ಬಾರಿ ‘ಕಾಂಗ್ರೆಸ್ ಪಕ್ಷವನ್ನು ತೆಗೆಯಬೇಕು’ ಎಂದರು. ಸಿದ್ದರಾಮಯ್ಯ ಮಾತು ಕೇಳಿ ಸಭೆಯಲ್ಲಿದ್ದವರು ಕಕ್ಕಾಬಿಕ್ಕಿಯಾದರು. ಆದರೂ ಬಾಯಿ ತಪ್ಪಿ ಮಾತನಾಡಿದ್ದು ಅವರ ಗಮನಕ್ಕೆ ಬರಲಿಲ್ಲ. ಕೊನೆಗೆ ಎಸ್.ಆರ್.ಪಾಟೀಲ್ ಅವರು ಕಾಂಗ್ರೆಸ್ ಅಲ್ಲ ಬಿಜೆಪಿ ತೆಗೆಯಬೇಕು ಎಂದು ಎಚ್ಚರಿಸಿದರು.
ಬಳಿಕ ಸಾವರಿಸಿಕೊಂಡ ಸಿದ್ದರಾಮಯ್ಯ, ತಮ್ಮ ಭಾಷಣ ಮುಂದುವರಿಸಿ ಬಿಜೆಪಿ ವಿರುದ್ಧ ಹರಿಹಾಯ್ದರು. ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಇದೆ, ಕೋವಿಡ್ ಸಲಕರಣೆಗಳ ಖರೀದಿ, ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನನ್ನ 40 ವರ್ಷದ ಆಡಳಿತದಲ್ಲಿ ಇಷ್ಟು ಭ್ರಷ್ಟ ಸರ್ಕಾರವನ್ನು ನೋಡಿಲ್ಲ. ಅಭಿವೃದ್ಧಿ ಮಾಡಲು ಇವರ ಬಳಿ ದುಡ್ಡಿಲ್ಲ, ಸುಮ್ಮನೆ ಘೋಷಣೆ ಮಾಡುತ್ತಾರೆ ಎಂದು ಕಿಡಿಕಾರಿದರು.