ಗದಗ: ಛತ್ತೀಸ್ ಗಢದ ಬಿಎಸ್ಎಫ್ ರಿಜ್ಮೆಂಟ್ ನಲ್ಲಿ ಗಡಿಭಾಗದಲ್ಲಿ ಕರ್ತವ್ಯನಿರತ ವೇಳೆ ಮೃತರಾಗಿರುವ ಯೋಧನ ಪಾರ್ಥಿವ ಶರೀರ ತಡರಾತ್ರಿ ತಾಯಿ ನಾಡಿಗೆ ಬಂದಿದೆ. ಕರ್ತವ್ಯ ನಿರತ ವೇಳೆ ಸರ್ವಿಸ್ ರೈಫಲ್ ನಿಂದ ಅಚಾನಕ್ ಆಗಿ ಗುಂಡು ಮರಳಿ ತಗುಲಿ ಯೋಧ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮದ ಲಕ್ಷ್ಮಣ್ ಗೌರಣ್ಣವರ(31) ಎಂಬ ಯೋಧ ಮೃತಪಟ್ಟಿದ್ದಾರೆ. ಗಡಿ ಭಾಗದಲ್ಲಿ ನಕ್ಸಲರು ಹಾಗೂ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ನಕ್ಸಲರ ವಿರುದ್ಧ ಗುಂಡು ಹಾರಿಸಲು ರೈಫಲ್ ತಯಾರಿಯಲ್ಲಿ ಯೋಧ ತೊಡಗಿದ್ದರು. ಈ ಸಂದರ್ಭದಲ್ಲಿ ಅಚಾನಕ್ಕಾಗಿ ಗುಂಡು ಮರಳಿ ಸಿಡಿದು ಎದೆ ಸೀಳಿದ್ದು, ಸ್ಥಳದಲ್ಲೇ ಲಕ್ಷ್ಮಣ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹುಡುಗ್ರು ಸರಿಯಿಲ್ಲ, ಅವರ ಬುದ್ಧಿ ಸರಿಯಿಲ್ಲ – ಮಂಜು ಹೀಗಂದಿದ್ಯಾಕೆ..?
ಕಳೆದ 12 ವರ್ಷಗಳಿಂದ ಬಿಎಸ್ಎಫ್ ನಲ್ಲಿ ಲಕ್ಷ್ಮಣ್ ಸೇವೆ ಸಲ್ಲಿಸುತ್ತಿದ್ದರು. ಕಳೆದ 2 ತಿಂಗಳು ಹಿಂದೆಯಷ್ಟೇ ಊರಿಗೆ ಬಂದು ಹೋಗಿದ್ದರು. ಈಗ ಮತ್ತೆ ಶವವಾಗಿ ತಾಯಿನಾಡಿಗೆ ಯೋಧನ ಪಾರ್ಥಿವ ಶರೀರ ಬಂದಿದೆ. ವಾಹನ ಬರುತ್ತಿದ್ದಂತೆ ನೆರೆದ ಜನರು ಭಾರತಾಂಬೆಗೆ ಜೈಘೋಷ ಕೂಗಿದರು. ಪುಷ್ಪಗೈಯುವ ಮೂಲಕ ಯೋಧನ ಮೃತದೇಹ ಬರಮಾಡಿಕೊಂಡರು. ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯೋಧನಿಗೆ ಎರಡು ಹೆಣ್ಣು ಮಗು ಹಾಗೂ ಒಂದೂವರೆ ವರ್ಷದ ಮತ್ತೊಂದು ಚಿಕ್ಕ ಗಂಡು ಮಗುವಿದೆ. ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಪಾಲಕರು ಹಾಗೂ ಗಂಡನನ್ನು ಕಳೆದುಕೊಂಡು ಪತ್ನಿ ಹಾಗೂ ಚಿಕ್ಕ ಮಕ್ಕಳ ಕಷ್ಟ ಕೇಳತೀರದಾಗಿದೆ.
ಲಕ್ಷ್ಮೇಶ್ವರ ತಹಶೀಲ್ದಾರ್ ಬ್ರಮರಾಂಭ ಗುಬ್ಬಿಶೆಟ್ಟಿ, ಹಾಗೂ ಪೊಲೀಸ್ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮೊಳಗಿತ್ತು. ಒಟ್ಟಿನಲ್ಲಿ ತಡರಾತ್ರಿ ಆದರೂ ಜನ ಕಿಕ್ಕಿರಿದು ಸೇರಿದ್ದರು. ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳ ಮೂಲಕ ಗದಗ ಜಿಲ್ಲೆಯ ಗೋಜನೂರು ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಿತು.