ರಾಯಚೂರು: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.
ಬುಧವಾರ ಸಂಜೆಯಿಂದಲೇ ಗುಡುಗು, ಸಿಡಿಲು ಜೋರಾಗಿದ್ದರಿಂದ ಸಿಡಿಲು ಬಡಿದು ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಯಚೂರು ತಾಲೂಕಿನ ಹುಣಶ್ಯಾಳ ಹುಡಾ ಗ್ರಾಮದ ಚಂದ್ರಶೇಖರ್ (58), ದೇವದುರ್ಗ ತಾಲೂಕಿನ ಇಂಗಳದಾಳ ಗ್ರಾಮದಲ್ಲಿ ಬೂದೆಪ್ಪ(18) ಸಿಡಿಲಿಗೆ ಬಲಿಯಾಗಿದ್ದಾರೆ.
ಸಿಡಿಲಿನಿಂದ ಇಬ್ಬರು ಯುವಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು ಭತ್ತ ಬೆಳೆದು ಜಮೀನಿನಲ್ಲಿ ಸಂಗ್ರಹಿಸಿಟ್ಟಿರುವ ರೈತರಲ್ಲಿ ಆತಂಕ ಹೆಚ್ಚಾಗಿದೆ.
ರಾಯಚೂರು ತಾಲೂಕಿನ ಹಾಳು ತಿಮ್ಮಪೂರ ಗ್ರಾಮದಲ್ಲಿ ಬಿರುಗಾಳಿಗೆ ಕುಡಿಯವ ನೀರಿನ ಶುದ್ಧೀಕರಣ ಘಟಕ ಹಾಳಾಗಿದೆ. ಘಟಕದ ಶೆಡ್, ಪೈಪ್ಗಳು ಕಿತ್ತುಕೊಂಡು ಹೋಗಿ ದೂರದಲ್ಲಿ ಬಿದ್ದಿವೆ. ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ.