ಹಾವೇರಿ: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ರೈತರೂ ಕೂಡ ಕಂಗಾಲಾಗಿದ್ದಾರೆ. ತಾವು ಬೆಳೆದಿದ್ದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಿದ್ದಾರೆ.
ಹಾವೇರಿಯ ಕನಕಾಪುರ ಗ್ರಾಮದ ರೈತ ಪಕ್ಕೀರಗೌಡ ಅವರು ತಾವು ಬೆಳೆದಿದ್ದ ಬದನೆಕಾಯಿ, ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಬೇಸರ ವ್ಯಕ್ತಪಡಿಸಿದ್ದಾರೆ.
ಫಕೀರಪ್ಪ ಅವರು ತಮ್ಮ ಒಂದು ಎಕರೆಯಲ್ಲಿ ಬೆಳೆದ ಬದನೆಕಾಯಿ ಬೆಳೆ ಫಸಲಿಗೆ ಬರುತ್ತಿದ್ದಂತೆ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಸದ್ಯ ಬದನೆಕಾಯಿ ಹಾಗೂ ಟೊಮೆಟೊ ಗಿಡದಲ್ಲಿ ಹಣ್ಣಾಗಿ ಹಾಳಾಗುತ್ತಿದ್ದು, ಬದನೆಕಾಯಿ ಕಿತ್ತು ಬೀದಿಗೆ ಹಾಕೋ ಪರಿಸ್ಥಿತಿಗೆ ಬಂದಿದೆ. ಇತ್ತ ದಲ್ಲಾಳಿಗಳು ನೂರು ರೂಪಾಯಿಗೆ ನಾಲ್ಕು ಟ್ರೇ ಬದನೆಕಾಯಿ ಕೇಳುತ್ತಿದ್ದಾರೆ. ಆದರೆ ಈ ಹಣ ವಾಹನದ ಬಾಡಿಗೆಯೂ ಬಾರದ ಹಿನ್ನೆಲೆಯಲ್ಲಿ ರೈತ ಕಣ್ಣೀರು ಹಾಕುತ್ತಿದ್ದಾರೆ.
ಸುಮಾರು ಮೂರು ಎಕರೆ ಜಮೀನು ಹೊಂದಿರುವ ರೈತ, 20 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಅಂದಾಜು ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಲಾಕ್ ಡೌನ್ ನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಮದುವೆ, ಸಭೆ ಸಮಾರಂಭಗಳು ನಡೆಯದ ಕಾರಣ ಬೇಡಿಕೆ ಕೂಡ ಕಡಿಮೆಯಾಗಿದೆ. ಹೀಗಾಗಿ ಫಕೀರಪ್ಪ ಕಣ್ಣೀರು ಹಾಕುತ್ತಿದ್ದಾರೆ.