ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರು ಜೈಲುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ಗಣೇಶ್ ಹಾಗೂ ಶಶಿಕುಮಾರ್ ಬಂಧಿತರು. ಕಳೆದ 2 ದಿನಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಂತಾಮಣಿ ಮೂಲದ 24 ವರ್ಷದ ಅನುಪಮಾ ಎಂಬ 8 ತಿಂಗಳ ಗರ್ಭಿಣಿ ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆಕೆಯ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಸರ್ಕಾರ, ಸಚಿವ ಸುಧಾಕರ್ ಹಾಗೂ ವೈದ್ಯರ ವಿರುದ್ಧ ಅವಾಚ್ಯ ಪದಗಳನ್ನ ಬಳಸಿ ಆಕ್ರೋಶ ಹೊರಹಾಕಿದ್ರು.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಚಿವರು ಸಹ ಮುಜುಗರ ಅನುಭವಿಸುವಂತಾಗಿತ್ತು. ಮತ್ತೆ ಆಕ್ರೋಶಿತರು ಸಹ ಸಭ್ಯತೆಯ ಎಲ್ಲೆ ಮೀರಿ ಪದ ಬಳಕೆ ಮಾಡಿದ್ರು. ಹೀಗಾಗಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅಂದು ಕೋವಿಡ್ ಆಸ್ಪತ್ರೆ ಬಳಿ ಕರ್ತವ್ಯನಿರತರಾಗಿದ್ದ ಎಎಸ್ಐ ಮುರುಳಿ ಈ ಸಂಬಂಧ ಕರ್ತವ್ಯಕ್ಕೆ ಅಡ್ಡಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತ ಕಾಯ್ದುಕೊಳ್ಳದೇ, ಸಚಿವ ಸುಧಾಕರ್ ರವರ ವಿರುದ್ಧ ಜೋರು ಧ್ವನಿಯಲ್ಲಿ ನಿಂದಿಸಿದ್ರು. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ರು.
ದೂರಿನನ್ವಯ ಸದ್ಯ ಮೃತಳ ತಂದೆ ಗಣೇಶ್, ಹಾಗೂ ಸಹೋದರ ಶಶಿಕುಮಾರ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ. ಆದೆ ಇದ್ರಲ್ಲಿ ಶಶಿಕುಮಾರ್ ಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.