ಬೆಂಗಳೂರು: ಆಕ್ಸಿಜನ್ ಸಮಸ್ಯೆ ಸಂಬಂಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸಚಿವರ ಜೊತೆ ಮಾತನಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲೆಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ದಾಸ್ತಾನಿಗೆ ಅವಕಾಶ ಇದೆ ಅದನ್ನು ಕೊಡಿಸಲಾಗುವುದು. ಸಿಲಿಂಡರ್ ಮೂಲಕವೇ ಆಗಬೇಕಾದ ಕಡೆಗೆ ಖಾಲಿ ಸಿಲಿಂಡರ್ ವಿತರಿಸಿ ಆ ಮೂಲಕವೂ ದಾಸ್ತಾನಿಗೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು. ಕೇಂದ್ರ ಸರ್ಕಾರ ಇದಕ್ಕೆ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ವೈದಕೀಯ ಆಮ್ಲಜನಕದ ಸಮರ್ಪಕ ಪೂರೈಕೆ ಹಾಗೂ ಲಭ್ಯತೆ ಬಗ್ಗೆ ಇರುವ ಗೊಂದಲವನ್ನು ನಿವಾರಿಸಲು ಪ್ರಮುಖ ತಯಾರಕರು ಹಾಗೂ ವಿತರಕರ ಸಭೆಯನ್ನು@JagadishShettar ಹಾಗೂ @mla_sudhakar ಅವರ ನೇತೃತ್ವದಲ್ಲಿ ಇಂದು ಸಭೆ ಕರೆಯಲಾಗಿತ್ತು
ಎಲ್ಲಾ ರೀತಿಯ ಗೊಂದಲಗಳನ್ನು ವ್ಯವಸ್ಥಿತವಾಗಿ ಸಮರೋಪಾದಿಯಲ್ಲಿ ನಿವಾರಿಸಲು ಪ್ರಯತ್ನಿಸಲಾಗುವುದು pic.twitter.com/NVz7Gw6dwq
— Tejasvi Surya (@Tejasvi_Surya) April 19, 2021
ಆಕ್ಸಿಜನ್ ಸಮಸ್ಯೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೇಂದ್ರದ ಜೊತೆ ನಿನ್ನೆ ಮಾತಾಡಿದ್ದಾರೆ. ಎಲ್ಲೆಲ್ಲಿ ಸ್ಟೋರೆಜ್ ಕೆಪ್ಯಾಸಿಟಿ ಇದೆ ಅಲ್ಲಿಗೆ ಸ್ಟೋರ್ ಮಾಡಲು ಹೇಳಿದ್ದೇವೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಆಗಲಿದೆ ಎಂದು ಹೇಳಿದರು.
ಎಲ್ಲಾ ರಾಜ್ಯದ ರಾಜ್ಯಪಾಲರಿಗೆ ಕೊರೊನಾ ಸಂಬಂಧ ಸಭೆ ಮಾಡಿ ಸರ್ಕಾರಕ್ಕೆ ಸಲಹೆ ನೀಡುವಂತೆ ಹೇಳಿದೆ. ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಟೀಕೆಗೆ ಅಶೋಕ್ ಉತ್ತರ ನೀಡಿದರು.
ಕಾಂಗ್ರೆಸ್ ಯಾವಾಗಲೂ ಗೊಂದಲ ಮೂಡಿಸುತ್ತದೆ. ಅವರ ಪಕ್ಷ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಏನ್ ಮಾಡಿದ್ದಾರಂತ ಸಲಹೆ ನೀಡಲಿ. ನಾವು ಅದನ್ನು ಅಳವಡಿಸಿಕೊಳ್ಳುತ್ತೇವೆ. ಇದು ರಾಜಕೀಯ ಮಾಡುವ ವಿಚಾರ ಅಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಕೊರೊನಾ ಇದೆ ಎಂದು ಕಾಂಗ್ರೆಸ್ ಭಾವಿಸಿದೆ. ಕೊರೊನಾ ನಮ್ಮ ರಾಜ್ಯಕ್ಕೆ ಮಾತ್ರ ಬಂದಿರುವುದಲ್ಲ ಎಂದು ತಿರುಗೇಟು ನೀಡಿದರು.