ಚಿಕ್ಕಬಳ್ಳಾಪುರ: ಶಾಲೆಗೆ ಹೊರಟಿದ್ದ ಬಾಲಕನಿಗೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದ ಗೇಟ್ ನಲ್ಲಿ ನಡೆದಿದೆ.
ಚೇತನ್ (13) ಮೃತ ಬಾಲಕ. ಚೇತನ್ ಶಿಡ್ಲಘಟ್ಟ ಪಟ್ಟಣದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ವಿದ್ಯಾರ್ಥಿ ಶಾಲೆಗೆ ತೆರಳಲು ತಾದೂರು ಗ್ರಾಮದ ಗೇಟ್ಗೆ ನಡೆದುಕೊಂಡು ಬಂದಿದ್ದನು. ಅಲ್ಲಿಂದ ಶಾಲಾ ಬಸ್ ನಲ್ಲಿ ಶಾಲೆಗೆ ತೆರಳುವವನಿದ್ದ, ಆದರೆ ಅಷ್ಟರಲ್ಲಿ ಟಾಟಾ ಏಸ್ ಹಾಲಿನ ವಾಹನ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.