ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿ ಪ್ರದೂಷ್ ಅವರನ್ನ ಮಾಫಿ ಸಾಕ್ಷಿ (Approver)ಯಾಗಿ ಪರಿಗಣಿಸುವ ಸಂಬಂಧ ಪ್ರಾಸಿಕ್ಯೂಷನ್ ಕೋರ್ಟ್ಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸಿದೆ.
ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ನ್ಯಾಯಾಲಯಕ್ಕೆ ಒಪ್ಪಿಗೆ ಮೆಮೋ ಸಲ್ಲಿಸಿದ್ದು, ಕೆಲ ಷರತ್ತುಗಳಿಗೆ ಒಳಪಟ್ಟು ಪ್ರದೂಷ್ಗೆ ಮಾಫಿ ಸಾಕ್ಷಿ ಅವಕಾಶ ನೀಡಬಹುದೆಂದು ತಿಳಿಸಿದ್ದಾರೆ.


ಷರತ್ತು ಏನು?
ಪ್ರಾಸಿಕ್ಯೂಷನ್ ಪರವಾಗಿ, ಪ್ರದೂಷ್ಗೆ (Pradosh) ಪ್ರಕರಣದ ಬಗ್ಗೆ ತಿಳಿದಿರುವ ಎಲ್ಲಾ ಸತ್ಯಾಂಶಗಳನ್ನ ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಕೇವಲ ತನ್ನ ವಿರುದ್ಧದ ಆರೋಪಗಳಷ್ಟೇ ಅಲ್ಲ ಉಳಿದೆಲ್ಲಾ ಆರೋಪಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ನ್ಯಾಯಾಲಯದ ಮುಂದೆ ಹೇಳಬೇಕೆಂಬ ಷರತ್ತು ವಿಧಿಸಲಾಗಿದೆ.
ಇದೇ ವೇಳೆ, ಎ10 ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಮಾಫಿ ಸಾಕ್ಷಿಗೆ ಆರೋಪಿಗಳು ಅರ್ಜಿ ಸಲ್ಲಿಸುವಂತಿಲ್ಲ
ಈ ಸಂದರ್ಭದಲ್ಲಿ ವಕೀಲ ರಂಗನಾಥ್ ರೆಡ್ಡಿ ಪ್ರಬಲ ವಾದ ಮಂಡಿಸಿದರು. ಮಾಫಿ ಸಾಕ್ಷಿಗೆ ಸಂಬಂಧಿಸಿದ ಅರ್ಜಿಯನ್ನು ಆರೋಪಿಗಳು ಸಲ್ಲಿಸುವಂತಿಲ್ಲ. ಅದು ಪ್ರಾಸಿಕ್ಯೂಷನ್ ಮೂಲಕವೇ ಸಲ್ಲಿಕೆಯಾಗಬೇಕು ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಪ್ರಕರಣದಲ್ಲಿ ಯಾವ ಆರೋಪಿಯನ್ನ ಮಾಫಿ ಸಾಕ್ಷಿಯನ್ನಾಗಿ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ಪ್ರಾಸಿಕ್ಯೂಷನ್ ನಿರ್ಧರಿಸಬೇಕು. ಯಾವುದೇ ಆರೋಪಿ ಸಲ್ಲಿಸಿರುವ ಅರ್ಜಿಗೆ ನೇರವಾಗಿ ಒಪ್ಪಿಗೆ ನೀಡುವುದು ಸೂಕ್ತವಲ್ಲ ಎಂದು ಅವರು ವಾದಿಸಿದರು. ಆರೋಪಿಗಳ ಪಾತ್ರ ಮತ್ತು ಪ್ರಕರಣದ ಸಂದರ್ಭಗಳನ್ನ ಪರಿಶೀಲಿಸಿ ಪ್ರಾಸಿಕ್ಯೂಷನ್ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ವಾದ ಮಂಡಿಸಿದರು.

ಇದಲ್ಲದೆ, ಜೈಲಿನಲ್ಲಿರುವ ಆರೋಪಿ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದರೆ ವಿಚಾರಣೆ (ಟ್ರಯಲ್) ಪೂರ್ಣಗೊಳ್ಳುವವರೆಗೂ ಜೈಲಿನಲ್ಲೇ ಇರಬೇಕಾಗುತ್ತದೆ ಎಂಬ ಕಾನೂನು ಅಂಶವನ್ನು ಆರೋಪಿಗಳಿಗೆ ತಿಳಿಸಬೇಕಾಗುತ್ತದೆ ಎಂದು ರಂಗನಾಥ್ ರೆಡ್ಡಿ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಪಿ, ಅರ್ಜಿ ಸಲ್ಲಿಸಿರುವ ಆರೋಪಿ ಹಾಗೂ ಅವರ ವಕೀಲರಿಗೆ ಈ ಕಾನೂನು ವಿಚಾರಗಳ ಬಗ್ಗೆ ಮಾಹಿತಿ ಇದ್ದೇ ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಾಲಯದ ಗಮನಕ್ಕೆ ತಂದರು.
ಪ್ರದೂಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಕುರಿತು ಉಳಿದ ಆರೋಪಿಗಳ ಆಕ್ಷೇಪಣೆಗಳನ್ನು ಆಲಿಸಬೇಕೇ ಅಥವಾ ಬೇಡವೇ ಎಂಬ ವಿಷಯದಲ್ಲಿ ನ್ಯಾಯಾಲಯ ಸೋಮವಾರ (ಆಗಸ್ಟ್ 10) ಆದೇಶ ಪ್ರಕಟಿಸಲಿದೆ.

