– ಆತನ ನನಗೇನೂ ವಂಚನೆ ಮಾಡಿಲ್ಲ
– ನನಗೂ ಆತನಿಗೂ ಸಂಬಂಧ ಇಲ್ಲ
– ಆತನ ಮನೆಗೆ ಹೋಗಿದ್ದೆ
ಬೆಂಗಳೂರು: ವಂಚಕ ಯುವರಾಜ್ ಸ್ವಾಮಿ ನಡೆ, ವೇಷಭೂಷಣ ನೋಡಿ ದೈವಭಕ್ತ ಇರಬೇಕು ಅನ್ಕೊಂಡೆ. ಹಾಗಾಗಿ ಆತನ ಮನೆಗೆ ಹೋಗಿದ್ದೆ. ಈಗ ಅನಿಸ್ತಿದೆ ಅವನ ಮನೆಗೆ ಹೋಗಿದ್ದು ತಪ್ಪು ಅಂತ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಸಚಿವ ವಿ. ಸೋಮಣ್ಣ ಜೊತೆ ಯುವರಾಜ್ ಫೋಟೋ ವಿಚಾರವಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಯುವರಾಜ್ ನಮ್ಮ ಕ್ಷೇತ್ರದ ಮತದಾರ ಆಗಿದ್ದಾರೆ. ಒಮ್ಮೆ ಮನೆಗೆ ಕರೆದಾಗ ಹೋಗಿ ಬಂದಿದ್ದೆ. ಫೋಟೋ ಯಾರು ತೆಗೆದರೋ ಗೊತ್ತಿಲ್ಲ, ಆತ ನಾಲ್ಕೈದು ಬಾರಿ ಕರೆ ಮಾಡಿದ್ದ ಎಂದು ಹೇಳಿದ್ದಾರೆ.
ಯುವರಾಜ್ ವಂಚಕ ಅಂತ ಮೊದಲೇ ಅರಿಯಲು ನಾನು ದೇವರಲ್ಲ. ಮಾಧ್ಯಮಗಳಲ್ಲಿ ಬಂದ ಮೇಲೆ ಆತ ವಂಚಕ, ತುಂಬಾ ಜನಕ್ಕೆ ಮೋಸ ಮಾಡಿದ್ದಾನೆ ಅಂತ ಗೊತ್ತಾಗಿದ್ದು. ಆತ ನನಗೇನೂ ವಂಚನೆ ಮಾಡಿಲ್ಲ. ಯಾರಿಗೆ ವಂಚಿಸಿದ್ದಾನೆ ಎಂದೂ ನನಗೆ ಗೊತ್ತಿಲ್ಲ. ಆತನ ವೇಷಭೂಷಣ ನೋಡಿ ದೈವ ಭಕ್ತಕೊಂಡಿದ್ದೆನು. ಹೀಗಾಗಿ ಅವನ ಮನೆಗೆ ಹೋಗಿದ್ದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಆತನ ಮನೆ ಅದ್ಧೂರಿಯಾಗಿದೆ. ತಪ್ಪು ಮಾಡಿದವರ ಪಾಪದ ಕೊಡ ತುಂಬಿದ್ರೆ ಹೊರಗೆ ಬರುತ್ತೆ. ಅದಕ್ಕೆ ಯುವರಾಜ್ ನೇ ನಿದರ್ಶನವಾಗಿದ್ದಾನೆ. ಆತ ಮಹಾ ಬುದ್ಧಿವಂತ ಅನ್ಕೊಂಡಿದ್ದೆ, ಇಂಥ ಬುದ್ಧಿವಂತ ಅಂತ ಗೊತ್ತಿರಲಿಲ್ಲ ನನಗೆ. ಯುವರಾಜ್ ಮನೆಯಲ್ಲಿ ಕಾಫಿ ಕುಡಿದಿದ್ದೆ, ಆತ ಕೊಟ್ಟ ತಟ್ಟೆ ನೋಡಿಯೇ ದಿಗಿಲಾಗಿತ್ತು. ಆಗ ನಾನು ಇದೇನು ಸ್ವಾಮಿ ಅಂತ ಹೇಳಿದ್ದೆನು. ಆತನ ಹೆಸರು ಮೊದಲು ಯಾವಾಗ ಕೇಳಿದ್ದು ನೆನಪಿಲ್ಲ. ಆತನನ್ನ ಬೇರೆಲ್ಲೂ ನಾನು ನೋಡಿಲ್ಲ ಎಂದರು.
ನನಗೂ ಆತನಿಗೂ ಸಂಬಂಧ ಇಲ್ಲ. ನನ್ನ ಮುಂದೆ ಯಾವುದೇ ಅರ್ಜಿ ಹಿಡಿದು ಆತ ಬಂದಿರ್ಲಿಲ್ಲ. ಒಮ್ಮೆ ಯಾರನ್ನೋ ಪರಿಚಯ ಮಾಡಿಕೊಡ್ತೀನಿ ಅಂದಿದ್ದನು ಬೇಡಪ್ಪ ಅಂತ ಹೇಳಿದ್ದೆ. ಸಿಸಿಬಿ ಕರೆದರೆ ಹೋಗೋಣವಂತೆ. ಆದರೆ ನಾನು ಮತದಾರ ಅಂತಷ್ಟೇ ಮನೆಗೆ ಹೋಗಿದ್ದು, ನಾನು ಯಾರನ್ನೂ ನೋಯಿಸಲ್ಲ. ಆತನ ಮನೆಗೆ ಹೋಗಿದ್ದೇ ಕೊನೆ. ಮತ್ತೆಂದೂ ಆತನನ್ನು ನೋಡಿಲ್ಲ ಎಂದು ಹೇಳಿದ್ದಾರೆ.