ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ನ ಟಾಪ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ತಂಡದಲ್ಲಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಕಪ್ ಗೆಲ್ಲಲು ವಿಫಲವಾಗಿದೆ. 2009, 2011, 2016ರಲ್ಲಿ ಫೈನಲ್ ತಲುಪಿದ್ದರೂ, ಕೊನೆಯ ಹೋರಾಟದಲ್ಲಿ ಸೋಲುಂಡಿತ್ತು. ಪ್ರತಿ ಬಾರಿ ತಂಡದ ಬ್ಯಾಟಿಂಗ್ ಬಲವಾಗಿದ್ದರೂ, ಬೌಲಿಂಗ್ ಪಡೆಯ ಕುರಿತು ಟೀಕೆಗಳು ಕೇಳಿ ಬರುತ್ತಿದ್ದವು.
2020ರ ಟೂರ್ನಿಯಲ್ಲಿ ಟೈಟಲ್ ಗೆಲ್ಲುವ ವಿಶ್ವಾಸದಲ್ಲಿ ಕಣ್ಕಕಿಳಿದ ಕೊಹ್ಲಿ ಸೇನೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಇದುವರೆಗೂ ಆಡಿದ ಏಳು ಪಂದ್ಯದಲ್ಲಿ ಐದರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಟಾಪ್ ಮೂರರಲ್ಲಿ ಸ್ಥಾನ ಪಡೆದಿದೆ.
ಚಾಂಪಿಯನ್ಸ್ ವಿರುದ್ಧ ಗೆಲುವು: ಈ ಬಾರಿಯ ಟೂರ್ನಿಯಲ್ಲಿ ಆರ್ ಸಿಬಿ ತಂಡ ಚಾಂಪಿಯನ್ ತಂಡಗಳಿಗೆ ಸೋಲುಣಿಸಿದ್ದು, ಮುಂಬೈ, ಚೆನ್ನೈ, ಕೋಲ್ಕತ್ತಾ ವಿರುದ್ಧ ಗೆದ್ದು ಬೀಗಿದೆ. ಸದ್ಯ ತಂಡವನ್ನು ಗಮನಿಸಿರುವ ವಿಶ್ಲೇಷಕರು ಆರ್ ಸಿಬಿ ಕಪ್ ಗೆಲ್ಲುವ ಎಲ್ಲ ಲಕ್ಷಣಗಳು ಕಾಣುತ್ತಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ, ಡಿವಿಲಿಯರ್ಸ್ ಸೂಪರ್ ಫಾರ್ಮ್: ಬೆಂಗಳೂರು ತಂಡದ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದ್ದು, ತಂಡಕ್ಕೆ ಆಧಾರವಾಗಿರುವ ಕೊಹ್ಲಿ, ಡಿವಿಲಿಯರ್ಸ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇತ್ತ ಆರಂಭಿಕ ದೇವದತ್ ಪಡಿಕ್ಕಲ್ ತಂಡಕ್ಕೆ ಭರವಸೆಯ ಆಟಗಾರನಾಗಿ ನಿಂತಿರುವುದು ಮತ್ತಷ್ಟು ಬಲ ನೀಡಿದೆ. ಕೊಹ್ಲಿ ವಿಫಲವಾದರೂ ಆರ್ ಸಿಬಿ ತಂಡ 200 ರನ್ ಗಳಿಸಿತ್ತು ಎಂಬುವುದು ತಂಡದ ಬ್ಯಾಟಿಂಗ್ ಬಲಕ್ಕೆ ಸಾಕ್ಷಿಯಾಗಿದೆ.
ಸುಂದರ್, ಶಿವಂ ದುಬೆ, ಕ್ರಿಸ್ ಮೋರಿಸ್ ಬ್ಯಾಟಿಂಗ್ನಲ್ಲಿ ಉತ್ತಮ ಡೆಪ್ತ್ ಕಾಣುತ್ತಿದ್ದು, ಇದರಲ್ಲಿ ಯಾವುದೇ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೂ ತಂಡಕ್ಕೆ ಗೆಲುವು ನಿಶ್ಚಿತ ಎಂದು ಹೇಳಬಹುದು. ಉತ್ತಮ ಪ್ರಾರಂಭ ಲಭಿಸಿದರೇ ಭಾರೀ ಸ್ಕೋರ್ ಗಳಿಸುವ ಸಾಮಥ್ರ್ಯ ಹೊಂದಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನವನ್ನು ಮುಂದುವರಿಸಿದರೆ ಆರ್ ಸಿಬಿ ಟೈಟಲ್ ಬರ ದೂರವಾಗಲಿದೆ.
ಬೌಲಿಂಗ್ ಕಾಂಬಿನೇಷನ್: ಪ್ರತಿ ಬಾರಿ ಬೌಲಿಂಗ್ ವಿಭಾಗದಲ್ಲಿ ಎಡವುತ್ತಿದ್ದ ಆರ್ ಸಿಬಿ, ಈ ಬಾರಿ ಉತ್ತಮ ಬೌಲಿಂಗ್ ಕಾಂಬಿನೇಷನ್ ಹೊಂದಿದೆ. ಇದುವರೆಗೂ ಎರಡು ಪಂದ್ಯಗಳಲ್ಲಿ ಸೋಲುಂಡರೂ ಕ್ರಿಸ್ ಮೋರಿಸ್ ಆಗಮನದೊಂದಿಗೆ ಬೌಲಿಂಗ್ ಪಡೆಗೆ ಮತ್ತಷ್ಟು ಶಕ್ತಿ ಲಭಿಸಿದೆ. ಡೆತ್ ಓವರ್ ಗಳಲ್ಲಿಯೂ ಬೌಲರ್ ಗಳು ವಿಕೆಟ್ ಪಡೆದು ಎದುರಾಳಿಗಳ ರನ್ ವೇಗಕ್ಕೆ ಕಡಿವಾಣ ಹಾಕುತ್ತಿದ್ದು, ಸೈನಿ, ಉದಾನಾ, ಸಿರಾಜ್ ಉತ್ತಮ ದಾಳಿ ನಡೆಸುತ್ತಿದ್ದಾರೆ. ಸ್ಪಿನ್ನರ್ ಗಳಾದ ಸುಂದರ್, ಚಹಲ್ ತಂಡದ ಪ್ರಮುಖ ಆಸ್ತ್ರಗಳಾಗಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಈ ಮ್ಯಾಜಿಕ್ ಮುಂದುವರಿದರೆ ಕೊಹ್ಲಿ ಸೇನೆಗೆ ಗೆಲುವು ಖಚಿತ.
ಕ್ರೀಡಾಂಗಣದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಲು ಕೋಚ್ ಹಾಗೂ ಸಿಬ್ಬಂದಿಯು ಶ್ರಮವೂ ಅಷ್ಟೇ ಮುಖ್ಯವಾಗಿರುತ್ತದೆ. ಹಿಂದಿನ ಆವೃತ್ತಿಯಲ್ಲಿ ಮುಂಬೈ, ಚೆನ್ನೈ ತಂಡಗಳ ಗೆಲುವು ಹಾಗೂ ಯುವ ಆಟಗಾರರಿಂದಲೇ ಕೂಡಿರುವ ಡೆಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲು ಸಿಬ್ಬಂದಿಯ ಕಾರ್ಯ ಪ್ರಮಖವಾಗಿತ್ತು. ಈ ಬಾರಿ ಟೂರ್ನಿಯಲ್ಲಿ ಬೆಂಗಳೂರು ತಂಡ ಹೊಸ ಕೋಚ್ ಸಿಬ್ಬಂದಿಯೊಂದಿಗೆ ಕಣಕ್ಕಿಳಿದಿತ್ತು. ಮೈಕ್ ಹನ್ಸಿನ್ ಆರ್ ಸಿಬಿ ತಂಡ ಪರ ಪಂದ್ಯದ ಗೆಲುವು ಉತ್ತಮ ವ್ಯೂಹಗಳನ್ನು ರಚಿಸುತ್ತಿದ್ದು, ಆಟಗಾರರಲ್ಲಿ ಉತ್ತಮ ಬಾಂಧವ್ಯ ಬೆಳೆಯಲು ಕಾರಣರಾಗಿದ್ದಾರೆ ಎನ್ನಬಹುದು. ಅದರಲ್ಲೂ ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಪ್ರತಿ ಬ್ಯಾಟ್ಸ್ ಮನ್ಗೆ ತಕ್ಕಂತೆ ಬೌಲಿಂಗ್ ವ್ಯೂಹ ರಚಿಸಲು ಯಶಸ್ವಿಯಾಗಿದ್ದರು. ಮುಂದಿನ ಪಂದ್ಯದಲ್ಲಿ ಅವರ ಯೋಜನೆಗಳು ಮತ್ತಷ್ಟು ಪ್ರಮುಖವಾಗಿವೆ.