ಹಾಸನ: ಹೊಸದಾಗಿ ಹಾಸನ ಗ್ರಾಮಾಂತರಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಯಾಗಿ ಬಂದ ಪೊಲೀಸ್ ಅಧಿಕಾರಿಗೆ ಠಾಣೆಯೊಳಗೆ ಪುಷ್ಪಾಭಿಷೇಕ ಮಾಡಲಾಗಿದ್ದು, ಈ ಬಗ್ಗೆ ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಹೆಸರು ಈ ಹಿಂದೆ ವರ್ಗಾವಣೆ ದಂಧೆಗೆ ಸಂಬಂಧಿಸಿದ ಆಡಿಯೋ ಒಂದರಲ್ಲಿ ಕೇಳಿಬಂದಿತ್ತು. ಅಂತಹ ರೌಡಿ ವ್ಯಕ್ತಿ ಓರ್ವನನ್ನು 25 ಲಕ್ಷ ರೂ. ಹಾಸನದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ. ಇಲ್ಲಿಗೆ ಬಂದ ಕೂಡಲೇ ರೌಡಿಗಳಿಂದಲೇ ಹೂವಿನ ಹಾರ ಹಾಕಿಸಿಕೊಂಡು, ಗೊಮ್ಮಟೇಶ್ವರನಿಗೆ ಅಭಿಷೇಕ ಮಾಡು ಹಾಗೆ ಹೂವಿನ ಅಭಿಷೇಕ ಮಾಡಿಸಿಕೊಂಡಿದ್ದಾರೆ. ಈತ ಓರ್ವ ಜಿಲ್ಲೆಯ ವರ್ಗಾವಣೆ ದಂಧೆಯ ಕಿಂಗ್ ಪಿನ್ ಎಂದು ರೇವಣ್ಣ ವ್ಯಂಗ್ಯವಾಡಿದರು.
ದಂಧೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಗೃಹ ಇಲಾಖೆ ಹೇಳಬೇಕು? ಬಸವರಾಜ್ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಬಗ್ಗೆ ನನಗೆ ಗೌರವವಿದೆ. ಒಂದು ಸ್ಥಳಕ್ಕೆ ವರ್ಗಾವಣೆ ಮಾಡಿ ಕಳುಹಿಸುವ ಮೊದಲು ಗೃಹ ಇಲಾಖೆಯವರು ಆತನ ಹಿನ್ನೆಲೆಯನ್ನು ನೋಡಬೇಕು. ಯಾವುದನ್ನು ಮಾಡದೇ ಏಕಾಏಕಿ ವರ್ಗಾವಣೆ ಮಾಡಲಾಗಿದೆ ಎಂದು ರೇವಣ್ಣ ಅಸಮಧಾನ ವ್ಯಕ್ತಪಡಿಸಿದರು.
ಪಿಎಸ್ಐ ಕಿರಣ್ ಆತ್ಮಹತ್ಯೆ ಬಗ್ಗೆಯೂ ಮುಂದೆ ವಿಡಿಯೋ ಬಹಿರಂಗ ಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಹಾಸನ ಜಿಲ್ಲೆಯಲ್ಲಿ ಏನಾದರೂ ದುರ್ಘಟನೆ ನಡೆದರೆ ಅದಕ್ಕೆ ಮೈಸೂರು ಐಜಿಪಿಯವರೇ ಕಾರಣವಾಗಿ ಮಾಡಬೇಕಾಗುತ್ತದೆ. ಐಜಿಪಿ ವಿಪುಲ್ ಕುಮಾರ್ ರಬ್ಬರ್ ಸ್ಟ್ಯಾಂಪ್ ಇದ್ದಂಗೆ. ಜಾತಿಯತೆಯನ್ನು ಗುರಿಯಾಗಿಟ್ಟುಕೊಂಡು ವರ್ಗಾವಣೆ ಮಾಡಲಾಗಿದ್ದು, ದುಡ್ಡು ಒಂದಿದ್ರೆ ಸಾಕು. ಭ್ರಷ್ಟರನ್ನು ಕೂಡಾ ಓಲೈಸುತ್ತಾರೆ. ಸುರೇಶ್ ಒರ್ವ ರೌಡಿಯಂತಿರುವ ಪೊಲೀಸ್ ಅಧಿಕಾರಿ ಎಂದು ರೇವಣ್ಣ ಕಿಡಿಕಾರಿದ್ದಾರೆ.