– 30 ಕಿ.ಮೀ. ಬಳಸಿ ಮಲೆನಾಡಿಗರ ಸಂಚಾರ
ಚಿಕ್ಕಮಗಳೂರು: ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಪಕ್ಕದ ಗುಡ್ಡ ಕುಸಿದು ಮಲೆನಾಡಿಗರು ಸುಮಾರು 30 ಕಿ.ಮೀ. ಬಳಸಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮುತ್ತೋಡಿ ಅರಣ್ಯ ವಲಯದ ಹತ್ತಾರು ಹಳ್ಳಿಗಳ ಜನರರಿದ್ದು, ಮಲೆನಾಡಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿದೆ. ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ಬಾಳೆಹೊನ್ನೂರು, ಕಳಸ ಹಾಗೂ ಕೊಪ್ಪ ಭಾಗದಲ್ಲಿ ಮಳೆ ಕುಂಠಿತಗೊಂಡಿದೆ. ಆಗಾಗ್ಗೆ ಅಲ್ಲಲ್ಲೇ ಸ್ವಲ್ಪ ಹೊತ್ತು ಸುರಿದು ಹೋಗುತ್ತಿದೆ.
ಕಳೆದ ರಾತ್ರಿ ಮುತ್ತೋಡಿ ಅರಣ್ಯ ವಲಯದ ಮುತ್ತೋಡಿ-ಹೊನ್ನಾಳ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ನಿಂದ ಮೂರು ಕಿ.ಮೀ. ದೂರದಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿದಿದ್ದು, ಹಳ್ಳಿಗರು 30 ಕಿ.ಮೀ. ಸುತ್ತಿಕೊಂಡು ಓಡಾಡುವಂತಾಗಿದೆ. ಶಿರವಾಸೆ, ಗಾಳಿಗುಡ್ಡೆ, ಹೊನ್ನಾಳ ಸೇರಿದಂತೆ ಮುತ್ತೊಡಿ ಅರಣ್ಯ ವಲಯದ ಹತ್ತಾರು ಹಳ್ಳಿಯ ಜನ ಕೊಳಗಾಮೆ ಮಾರ್ಗವಾಗಿ ಕೈಮಾರ ಬಂದು ಚಿಕ್ಕಮಗಳೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ಜಿಲ್ಲೆಯ ಬಯಲುಸೀಮೆ ಭಾಗವಾದ ತರೀಕೆರೆ ಹಾಗೂ ಅಜ್ಜಂಪುರದಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದೆ. ಬೀರೂರಿನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರೆ, ಅಜ್ಜಂಪುರ ತಾಲೂಕಿನ ಶಿವನಿ ಕೆರೆ ತುಂಬಿದ ಪರಿಣಾಮ ಈರುಳ್ಳಿ ಹೊಲಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ವರ್ಷ ಕೂಡ ಅಜ್ಜಂಪುರದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಒಂದು ಹೊಲದ ಈರುಳ್ಳಿ ಮತ್ತೊಂದು ಹೊಲಕ್ಕೆ ಹೋಗಿ ನಿಂತಿತ್ತು. ಈ ವರ್ಷ ಕೂಡ ಭಾರೀ ಮಳೆಯಿಂದ ಬಯಲುಸೀಮೆ ಭಾಗದ ಬಹುತೇಕ ಬೆಳೆಗಳು ವರುಣದೇವನಿಗೆ ಆಹುತಿಯಾಗಿವೆ. ಭಾರೀ ಮಳೆಯಿಂದ ಬಯಲುಸೀಮೆ ಭಾಗದಲ್ಲಿ ಬಹುತೇಕ ಬೆಳೆಗಳು ನೀರುಪಾಲಾಗಿದ್ದು, ಕಳೆದ ವರ್ಷವೂ ಹೀಗೆ ಆಯ್ತು, ಈ ವರ್ಷವೂ ಹೀಗೆ ಆಯಿತು ಎಂದು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಕಂಗಾಲಾಗಿದ್ದಾರೆ.