ಹಾವೇರಿ: ಬಿಜೆಪಿ ಸರ್ಕಾರ ಬಂದ್ಮೇಲೆ ಸಮಸ್ಯೆಗಳು ಸೃಷ್ಟಿ ಆಗುತ್ತಿವೆ, ವಿನಃ ಪರಿಹಾರ ಸಿಕ್ಕಿಲ್ಲ. ಕಳೆದ ವರ್ಷ ಅತಿವೃಷ್ಟಿ ಬಂತು, ಕೊರೊನಾ ಬಂತು. ಈಗ ಮತ್ತೆ ಪ್ರವಾಹ, ಅತಿವೃಷ್ಟಿ ಆಗಿದೆ ಎಂದು ಜೆಡಿಎಸ್ ನ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ವರ್ಷದಿಂದ ಸರ್ಕಾರ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ. ನನ್ನನ್ನೂ ಸೇರಿ ಸಾಮಾನ್ಯ ಜನರನ್ನ ಈ ಪ್ರಶ್ನೆ ಕಾಡುತ್ತಿದೆ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅದರಿಂದ ಏನು ಯಶಸ್ಸು ಕಂಡಿದ್ದಾರೆ. ಕುಮಾರಸ್ವಾಮಿ ಅವರು ಹದಿನಾಲ್ಕು ತಿಂಗಳಲ್ಲಿ ಮಾಡಿದ ಕೆಲಸಗಳು ಮತ್ತು ಈಗಿನ ಸರ್ಕಾರದ ಕೆಲಸಗಳನ್ನ ತಾಳೆ ಮಾಡಿನೋಡಿ ಎಂದು ಟೀಕಿಸಿದರು.
ಸಿಎಂ ವೈಮಾನಿಕ ಸಮೀಕ್ಷೆ ಮಾಡೋದು ತಪ್ಪಲ್ಲ. ಯಾವ ಪ್ರದೇಶದಲ್ಲಿ ಓಡಾಡಲು ಸಾಧ್ಯವಿಲ್ಲವೋ ಅಂತಹ ಕಡೆಗಳಲ್ಲಿ ವೈಮಾನಿಕ ಸಮೀಕ್ಷೆ ಮಾಡಬಹುದು. ಪ್ರವಾಹವಿದ್ದಾಗ ವೈಮಾನಿಕ ಸಮೀಕ್ಷೆ ಮಾಡಿದ್ರೆ ಉತ್ತಮ. ಪ್ರವಾಹ ಮುಗಿದ್ಮೇಲೆ ಅದರ ಪ್ರಯೋಜನವಿಲ್ಲ ಎಂದು ಎಂದು ವ್ಯಂಗ್ಯವಾಡಿದರು.