ಚಿತ್ರದುರ್ಗ: ಕೊರೊನಾ ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದು, ಈ ಮೂಲಕ ಸಾವನ್ನಪ್ಪಿರುವವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ ಕೇವಲ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದವರಿಗೆ ಮಾತ್ರ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಇದೀಗ ಜಿಲ್ಲೆಯ ಜನರಿಗೂ ಕೊರೊನಾ ವ್ಯಾಪಿಸಿದ್ದು, ಸೋಂಕಿನಿಂದಾಗಿ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ.
ಚಳ್ಳಕೆರೆಯ ಹಳೇ ಟೌನ್ ಬಡಾವಣೆಯ 70ವರ್ಷದ ವೃದ್ಧ ಹಾಗೂ ಚಿತ್ರದುರ್ಗದ ಹೊರಪೇಟೆ ಬಡಾವಣೆಯ 46 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ಕೋವಿಡ್-19 ಸೋಂಕಿತರು ಬಲಿಯಾಗುತಿದ್ದು, ಕೋಟೆನಾಡಿನ ಜನರನ್ನು ಬೆಚ್ಚಿ ಬೀಳಿಸಿದೆ. ಸೊಂಕಿತರ ಸಂಖ್ಯೆ ಕಡಿಮೆ ಇದ್ದರು ಸಹ ಪ್ರತಿನಿತ್ಯ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ದುರ್ಗದ ಜನರಲ್ಲಿ ಬಾರಿ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಇಂದು 17 ಜನರಿಗೆ ಸೋಂಕು ತಗುಲಿದೆ. ಈ ವರೆಗೆ ಒಟ್ಟು 218 ಪ್ರಕರಣಗಳು ಪತ್ತೆಯಾಗಿದ್ದು, 112 ಜನ ಡಿಸ್ಚಾರ್ಜ್ ಆಗಿದ್ದಾರೆ. 103 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಜನ ಸಾವನ್ನಪ್ಪಿದ್ದಾರೆ.