ಹಣದ ಹರಿವು ಹೆಚ್ಚಳ, 2021-22ರಲ್ಲಿ ಶೇ.7.4 ಜಿಡಿಪಿ ಗುರಿ – ಆರ್ಥಿಕ ಚೇತರಿಕೆಗೆ ಆರ್‌ಬಿಐ ಮದ್ದು

Public TV
3 Min Read
Shaktikanta Das

– ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿಕೆ
– ಜಿ20 ರಾಷ್ಟ್ರಗಳ ಪೈಕಿ ಭಾರತದ ಬೆಳವಣಿಗೆ ದರ ಹೆಚ್ಚು

ನವದೆಹಲಿ : ಕೊರೊನಾ ವೈರಸ್ ಸಂಕಷ್ಟ ಹಿನ್ನಲೆಯಲ್ಲಿ ದೇಶದ ಆರ್ಥಿಕ ಪ್ರಗತಿ ಕುಸಿದಿದ್ದು, ಈ ಹಣಕಾಸು ವರ್ಷದಲ್ಲಿ ಶೇ.1.9 ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ದಾಖಲಿಸುವ ವಿಶ್ವಾಸವಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಕೊರೊನಾ ವೈರಸ್ ನಿಂದಾಗಿ ದೇಶದ ಆರ್ಥಿಕತೆ ಕಷ್ಟ ಎದುರಾಗಿದೆ. ಹಾಗಿದ್ದರೂ ಜಿ-20 ರಾಷ್ಟ್ರಗಳ ಪೈಕಿ ಭಾರತ ಅತಿ ಹೆಚ್ಚು ಶೇ.1.9 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಆದರೆ 2021-22ರ ಅವಧಿಯಲ್ಲಿ ಶೇ.7.4 ಜಿಡಿಪಿ ದಾಖಲಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

IMF GDP

ಮುಖ್ಯಾಂಶಗಳು
– ಭಾರತದ ಆರ್ಥಿಕತೆಯನ್ನು ಆರ್‌ಬಿಐ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಕೊರೊನಾ ವೈರಸ್ ನಿಂದ ಹೊಡ್ಡ ಆರ್ಥಿಕ ಹಿನ್ನಡೆಯಾಗಿದೆ. 2020ರಲ್ಲಿ ಅತ್ಯಂತ ಕೆಟ್ಟ ಹಿಂಜರಿತವಾಗಲಿದೆ ಎಂದು ಐಎಂಎಫ್ ಹೇಳಿದೆ. ಮಾರ್ಚ್ 27ರ ನಂತರ ವಿಶ್ವದ ಆರ್ಥಿಕತೆ ಕುಸಿದಿದ್ದು ಈ ವೇಳೆ ಕೆಲವೇ ಕೆಲವು ದೇಶಗಳು ಉತ್ತಮ ಪ್ರಗತಿ ದರವನ್ನು ಕಾಯ್ದುಕೊಂಡಿದ್ದು, ಅದರಲ್ಲಿ ಭಾರತವೂ ಒಂದಾಗಿದೆ.

– ಚೆಸ್ಟ್ ಮೂಲಕ ಮಾರ್ಚ್ ಒಂದರಿಂದ 1.20 ಲಕ್ಷ ಕೋಟಿ ರೂ. ಹೊಸ ಕರೆನ್ಸಿ ಕರೆನ್ಸಿ ಚಲಾವಣೆಗೆ ಬಂದಿದೆ. ಕೋವಿಡ್-19 ನಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಟ್ ಕಂಪನಿಗಳ ವ್ಯವಹಾರಕ್ಕೆ ಸಮಸ್ಯೆಯಾಗಿದೆ. ಈ ಕಂಪನಿಗಳಿಗೆ ದೀರ್ಘಾವಧಿ ಸಾಲ ಒದಗಿಸುವ ಬಗ್ಗೆ ಆರ್‌ಬಿಐ ಗಮನ ವಹಿಸಲಿದೆ.

RBI

– ಉತ್ಪಾದನಾ ವಲಯಗಳಲ್ಲಿ ಹೆಚ್ಚು ನಷ್ಟವಾಗಿದ್ದು ಶೇ.25-30 ಬೇಡಿಕೆ ಕುಸಿದಿದೆ ರಫ್ತು ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಆರ್ಥಿಕತೆ 9 ಟ್ರಿಲಿಯನ್ ಡಾಲರ್ ಕುಸಿತ ಕಂಡಿದ್ದು ಉದ್ಯೋಗ ವಲಯಕ್ಕೆ ಭಾರೀ ಪೆಟ್ಟು ಬಿದ್ದಿದೆ.

– ರೆಪೋ ದರಲ್ಲಿ 25 ಬೇಸಿಸ್ ಅಂಕ ಇಳಿಸಿದೆ. ಈ ಮೂಲಕ ಶೇ.4. ಇದ್ದ ರೆಪೋ ದರ ಶೇ.3.75ಕ್ಕೆ ಇಳಿಕೆಯಾಗಿದೆ. (ವಾಣಿಜ್ಯ ಬ್ಯಾಂಕುಗಳು ಆರ್‍ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು)

RBI reuters

– 90 ದಿನಗಳಲ್ಲಿ ಸಾಲ ಮರುಪಾವತಿ ಮಾಡದವರಿಗೆ ಆರ್‌ಬಿಐ ವಿನಾಯ್ತಿಯಡಿ ರಿಯಾಯಿತಿ. ಈ ಸಾಲವನ್ನು ಎನ್‍ಪಿಎ(ವಸೂಲಾಗದ ಸಾಲ) ಎಂದು ಪರಿಗಣಿಸುವುದಿಲ್ಲ ಮತ್ತು ಕ್ರೆಡಿಟ್ ಸ್ಕೋರ್ ಇಳಿಕೆಯಾಗುವುದಿಲ್ಲ.

– ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ಗೆ (ನಬಾರ್ಡ್) 25 ಸಾವಿರ ಕೋಟಿ ರೂ., ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‍ಗೆ (ಎಸ್‍ಐಡಿಬಿ) 15 ಸಾವಿರ ಕೋಟಿ ರೂ., ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‍ಗೆ (ಎನ್‍ಎಚ್‍ಬಿ) 10 ಸಾವಿರ ಕೋಟಿ ರೂ. ನೀಡಲು ಒಪ್ಪಿಗೆ. ವಿಶೇಷ ಮರು ಬಂಡವಾಳ ಪೂರೈಕೆಗಾಗಿ ಒಟ್ಟು 50 ಸಾವಿರ ಕೋಟಿ ರೂಪಾಯಿ ಅನುದಾನ.

RBI

– ವಿದೇಶಿ ವ್ಯಾಪಾರದ ಅಲ್ಪಾವಧಿಯ ಕೊರತೆಯನ್ನು ನೀಗಿಸಲು ಸಂಗ್ರಹಿಸುವ ವಿದೇಶಿ ವಿನಿಮಯ ನಮ್ಮಲ್ಲಿ 476.5 ಶತಕೋಟಿ ಡಾಲರ್ ನಷ್ಟಿದೆ. ಇದು 11.8 ತಿಂಗಳ ಆಮದು ನಿರ್ವಹಣೆಗೆ ಸಾಕಾಗುತ್ತದೆ.

– ದೇಶದಲ್ಲಿ ಮೊಬೈಲ್ ಬ್ಯಾಂಕಿಂಗ್ ಬಳಕೆ ಹೆಚ್ಚಾಗಿದ್ದು, ಶೇ. 91ರಷ್ಟು ಎಟಿಎಂಗಳು ಕಾರ್ಯ ನಿರ್ವಹಿಸುತ್ತಿದೆ. ಬ್ಯಾಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಹಣದ ಹರಿವು ಕಾಪಾಡಿಕೊಂಡಿದ್ದು ಬ್ಯಾಂಕುಗಳಿಗೆ ಹಣ ಕೊರತೆ ಉಂಟಾಗಿಲ್ಲ. ಈ ಸಂಬಂಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ.

coronavirus 1 1000x600 1

– ಭಾರತದಲ್ಲಿ ಅಗತ್ಯ ಪ್ರಮಾಣ ದಿನಸಿ ದಾಸ್ತಾನು ಹೊಂದಿದ್ದು, ಈ ಬಾರಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದ್ದು, ಕೃಷಿ ವಲಯ ಚೇತರಿಕೆ ಕಾಣಲಿದೆ.

Share This Article
Leave a Comment

Leave a Reply

Your email address will not be published. Required fields are marked *