– ಮಾಜಿ ಸಿಎಂಗೆ ಬಿಎಸ್ವೈ ಫೋನ್
– ಶಾಸಕರ ಸಂಬಳ ಕಡಿತಕ್ಕೆ ಸಲಹೆ
– ಯತ್ನಾಳ್, ರೇಣುಕಾಚಾರ್ಯರನ್ನು ಅರೆಸ್ಟ್ ಮಾಡಿ
ಬೆಂಗಳೂರು: ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಮುಂದುವರಿದರೆ ಜನ ವಿರೋಧ ಮಾಡದೇ ಸಹಕಾರ ನೀಡಬೇಕು. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಸಹಕಾರ ನೀಡುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಂಕಷ್ಟದ ಸಮಯದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಸಾಥ್ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಯಡಿಯೂರಪ್ಪನವರು ನನಗೆ ಕರೆ ಮಾಡಿದ್ದರು. ಶಾಸಕರ ಸಂಬಳದಲ್ಲಿ ಶೇ.30ರಷ್ಟು ಕಡಿತ ಮಾಡಿ ಕೊರೊನಾ ಸಂಕಷ್ಟಕ್ಕೆ ಅದನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಸರ್ಕಾರಿ ಉದ್ಯೋಗಿಗಳ ಸಂಬಳ ಕಡಿತ ಮಾಡುವುದು ಬೇಡ ಎಂದು ತಿಳಿಸಿದರು.
ರಾಜ್ಯ ಅರ್ಥಿಕ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಬಜೆಟ್ ಅನುಷ್ಠಾನಕ್ಕೆ ಬೊಕ್ಕಸದಲ್ಲಿ ಹಣ ಇಲ್ಲ. ದಾರಿದ್ರ್ಯ ಸರ್ಕಾರ ಅಂತ ಬಜೆಟ್ ಭಾಷಣದಲ್ಲಿ ಟೀಕೆ ಮಾಡಿದ್ದೆ. ಅಂದೇ ಸರ್ಕಾರ ಸಂಕಷ್ಟದಲ್ಲಿ ಇತ್ತು. ಕೇಂದ್ರದಿಂದ ಈ ಹಿಂದೆ ನಮ್ಮ ಪಾಲು ಬಂದಿಲ್ಲ. ಈ ಬಾರಿಯೂ ರಾಜ್ಯ ಸಂಕಷ್ಟಕ್ಕೆ ಸಿಲುಕಲಿದೆ. ಅಬಕಾರಿ, ನೊಂದಣಿ ಎಲ್ಲವೂ ನಿಂತಿದೆ. ಹೀಗಾಗಿ ಸರ್ಕಾರ ಲಾಕ್ಡೌನ್ ಮುಗಿದ ಬಳಿಕ ತೆರಿಗೆಯಲ್ಲಿ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿದ್ದು ಹಲವು ಕಡೆ ಬಾರಿ ಭಾರೀ ಮಳೆ ಗಾಳಿಯಿಂದ ಭತ್ತ, ಕಬ್ಬು, ಬಾಳೆ, ಎಲ್ಲ ನೆಲ ಕಚ್ಚಿ ರೈತರಿಗೆ ಸಮಸ್ಯೆಯಾಗಿದೆ. ಅಧಿಕಾರಿಗಳಿಂದ ಸರ್ವೆ ಮಾಡಿಸಿ ಹಾನಿ ಮಾಹಿತಿ ತೆಗೆಸಿಕೊಂಡು ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯ ಮಾಡಿದರು.
ದೆಹಲಿಯ ಜಮಾತ್ಗೆ ತೆರಳಿದವರು ಚೆಕ್ ಮಾಡಿಸಿಕೊಳ್ಳಬೇಕು. ಸುಖಾ ಸುಮ್ಮನೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನ ನೆಪ ಮಾಡಿಕೊಂಡು ಅಲ್ಪಸಂಖ್ಯಾತ ರ ವಿರುದ್ಧ ಮಾತನಾಡುವವರ ವಿರುದ್ಧವೂ ಕ್ರಮ ನಡೆಸಬೇಕು ಎಂದು ಆಗ್ರಹಿಸಿದರು.
ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಶಾಸಕರಾಗಿ ಮುಂದುವರಿಯಲು ಅರ್ಹರಲ್ಲ. ಮೊದಲು ಸಂಸದೀಯ ಕಾರ್ಯದರ್ಶಿ ಹುದ್ದೆಯಿಂದ ರೇಣುಕಾಚಾರ್ಯ ಅವರನ್ನು ಸಿಎಂ ವಜಾ ಮಾಡಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಬ್ಬರನ್ನೂ ಕೂಡಲೇ ಆರೆಸ್ಟ್ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು.