ಮಡಿಕೇರಿ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದವರಿಗೆ ಮೊಬಿಯಸ್ ಫೌಂಡೇಶನ್ ಸ್ಪಂದಿಸಿದ್ದು, ಪಿಎಂ ಕೇರ್ಸ್ ನಿಧಿಗೆ 1 ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಪೂರೈಸಿ ಮಾನವೀಯತೆ ಮೆರೆದಿದೆ.
ಕೊರೊನಾ ಭೀತಿಯಿಂದ ದೇಶದಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಕೂಲಿ ಕಾರ್ಮಿಕರು ಹಾಗೂ ದಿನ ಕೂಲಿ ನೌಕರರು ತೀರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಸಾಮಾನ್ಯ ಅಗತ್ಯ ವೈದ್ಯಕೀಯ ಸಾಧನಗಳಿಗೂ ಸಮಸ್ಯೆ ಎದುರಾಗಿದೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಫೌಂಡೇಶನ್ನಿಂದ ಜಿಲ್ಲಾ ಆಸ್ಪತ್ರೆಗೆ ಬೇಕಾದ ವೆಂಟಿಲೇಟರ್ಗಳು, 300 ಮಾಸ್ಕ್ಗಳು ಮತ್ತು 200 ವೈಯಕ್ತಿಕ ಸಂರಕ್ಷಣಾ ಸಾಧನಗಳನ್ನು ದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾರ್ಮಿಕರಿಗೆ ಮತ್ತು ಬಡವರಿಗಾಗಿ 4 ಲಕ್ಷ ರೂಪಾಯಿ ಮೌಲ್ಯದ ಆಹಾರ ವಸ್ತು ವಿತರಣೆ ಮಾಡಿದ್ದಾರೆ.
ಬಡವರಿಗೆ ಅಗತ್ಯವಾದ ಅಡುಗೆ ಎಣ್ಣೆ, ಬೇಳೆಯನ್ನು ಜಿಲ್ಲಾಡಳಿತ ತೆರೆದಿರುವ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆಗೆ ವಿತರಿಸಿದರು. ಇದೇ ವೇಳೆ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಇತರರು ಇದ್ದರು.