ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ ಮ್ಯಾನ್’ ಸಿನಿಮಾ ತೆರೆಕಂಡು ಯಶಸ್ಸಿನ ಹಾದಿಯಲ್ಲಿ ಓಡುತ್ತಿದೆ. ಕನ್ನಡ ಚಿತ್ರ ವಿಮರ್ಶಕರು ಅಷ್ಟು ಸುಲಭದಲ್ಲಿ ಒಂದು ಸಿನಿಮಾವನ್ನು ಕಂಪ್ಲೀಟ್ ಒಪ್ಪುವುದಿಲ್ಲ. ಆದ್ರೆ ‘ಜಂಟಲ್ ಮ್ಯಾನ್’ ಚಿತ್ರ ಎಲ್ಲಾ ವರ್ಗದವರಿಂದಲೂ ಹೊಗಳಿಕೆಯ ಮಹಾಪೂರವನ್ನೇ ಸ್ವೀಕರಿಸಿದೆ. ಕಮರ್ಷಿಯಲ್ ಅಂಶಗಳನ್ನೂ ಒಳಗೊಂಡಂತೆ ಪರಭಾಷೆಯ ಯಾವ ಚಿತ್ರಕ್ಕೂ ಕಡಿಮೆ ಇಲ್ಲವೆಂಬಂತೆ ‘ಜಂಟಲ್ ಮ್ಯಾನ್’ ಸಿನಿಮಾ ರೂಪುಗೊಂಡಿದೆ.
ನಮ್ಮ ಜನ ತಾಯ್ನಾಡಿ, ತಾಯಿ ನೆಲದ ಸಿನಿಮಾಗಳನ್ನ ನೋಡಿ, ಹೊಗಳುವುದಕ್ಕಿಂತ ಪಕ್ಕದ ತಮಿಳು, ತೆಲುಗಿನ ಸಿನಿಮಾಗಳಿಗೆ ಮನಃಪೂರ್ವಕ ಹೊಗಳುತ್ತಾರೆ. ಕನ್ನಡದಲ್ಲಿ ಒಳ್ಳೆ ಸಿನಿಮಾಗಳೇ ಬರುವುದಿಲ್ಲ ಎಂಬ ಕೊಂಕು ಮಾತುಗಳನ್ನು ಆಡುವವರು ಕೆಲವರಿದ್ದಾರೆ. ಆ ಭಾವನೆಯನ್ನ ಮೊದಲು ತೆಗೆದು ಹಾಕಿ ಕನ್ನಡ ಸಿನಿಮಾಗಳು ರಿಲೀಸ್ ಆದಾಗ ಚಿತ್ರಮಂದಿರಕ್ಕೆ ಬಂದು ಆ ಸಿನಿಮಾಗಳನ್ನು ನೋಡಬೇಕು. ಆಗ ಅಂತ ವರ್ಗಕ್ಕೆ ಕನ್ನಡದಲ್ಲೂ ಇಂಥ ಸಿನಿಮಾಗಳು ಇವೆ ಅನ್ನೋದು ಅರಿವಿಗೆ ಬರುತ್ತೆ. ಅದನ್ನು ಮಾಡದೇ ಸೋಶಿಯಲ್ ಮೀಡಿಯಾದಲ್ಲೆಲ್ಲೋ ಸಿನಿಮಾ ಬಗ್ಗೆ ವಿಮರ್ಶೆ ಬಂದಾಗ ಕೇವಲ ಒಂದು ಲೈಕ್ ಅಥವಾ ಕಮೆಂಟ್ ಮಾಡಿ ಸುಮ್ಮನಾಗಿ ಬಿಡುತ್ತಾರೆ.
ಸದ್ಯ ಕನ್ನಡ ಚಿತ್ರರಂಗದ ಸ್ಥಿತಿಯೂ ಹಾಗೇ ಇದೆ. ಬರುವ ಎಲ್ಲಾ ಸಿನಿಮಾಗಳು ಉತ್ತಮವಾಗಿಯೇ, ಒಳ್ಳೆ ಕಂಟೆಂಟ್ ಹೊಂದಿದ ಸಿನಿಮಾಗಳು ಬರುತ್ತವೆಂದು ಹೇಳುವುದಕ್ಕಾಗಲ್ಲ. ಅದರ ನಡುವೆಯೂ ಒಳ್ಳೆ ಕಂಟೆಂಟ್ ಹೊಂದಿದ ಸಿನಿಮಾಗಳು ಸಾಕಷ್ಟು ಬರುತ್ತವೆ. ಅಂತ ಚಿತ್ರಗಳಲ್ಲೊಂದು ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್ ಮನ್’.
ಜಂಟಲ್ ಮನ್ ಚಿತ್ರದ ನಿರ್ದೇಶಕ ನಿಜಕ್ಕೂ ಪ್ರತಿಭಾವಂತ. ಮೊದಲ ಸಿನಿಮಾದಲ್ಲೇ ನಿರ್ದೇಶಕನಾಗಿ ಕಸುಬುದಾರಿಕೆ ತೋರಿದ್ದವರು. ಈ ಸಲವಂತೂ ತಮ್ಮ ಎಲ್ಲಾ ಶ್ರಮವನ್ನು ಧಾರೆಯೆರೆದು ಅಪರೂಪದ ಚಿತ್ರ ಮಾಡಿದ್ದಾರೆ. ಸಂಚಾರಿ ವಿಜಯ್ ಅವರಂಥಾ ನಟ ಕೂಡಾ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ಗುರು ದೇಶಪಾಂಡೆ ಸ್ವತಃ ನಿರ್ದೇಶಕರಾಗಿದ್ದೂ ಗಟ್ಟಿ ಕಥೆ ಹೊಂದಿದೆ ಎನ್ನುವ ಕಾರಣಕ್ಕೆ ಇಷ್ಟು ದಿನ ತಾವು ದುಡಿದದ್ದನ್ನೆಲ್ಲಾ ಸೇರಿಸಿ, ಅದರೊಟ್ಟಿಗೆ ಎಲ್ಲೆಲ್ಲಿಂದಲೋ ಹಣ ತಂದು ‘ಜಂಟಲ್ ಮ್ಯಾನ್’ ಚಿತ್ರವನ್ನು ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅವರಂತೂ ತಮ್ಮ ಸಿನಿಮಾ ಬದುಕಿನಲ್ಲೇ ಮೈಲಿಗಲ್ಲಾಗಿ ಉಳಿಯುವಂಥಾ ಪಾತ್ರದಲ್ಲಿ, ತಮ್ಮನ್ನು ತಾವು ಅರ್ಪಿಸಿಕೊಂಡು ನಟಿಸಿದ್ದಾರೆ. ಇವರೆಲ್ಲರ ಶ್ರಮಕ್ಕೆ ಪ್ರತಿಫಲ ದೊರೆಯಬೇಕೆಂದರೆ ಪ್ರೇಕ್ಷಕರು ಉತ್ಸಾಹದಿಂದ ಚಿತ್ರಮಂದಿರಕ್ಕೆ ಬರಬೇಕಲ್ಲವೇ? ನಮ್ಮ ಕನ್ನಡದ ಪ್ರೇಕ್ಷಕರ ಮನತಣಿಸಲು ಜಂಟಲ್ ಮನ್ ಗಿಂತಾ ಸಿನಿಮಾ ಬೇಕೇ? ಇಷ್ಟೆಲ್ಲ ಇದ್ದರೂ ಯಾಕೆ ನಮ್ಮವರು ಅಸಡ್ಡೆ ಮನೋಭಾವನೆ ತೋರುತ್ತಿದ್ದಾರೆ? ಎಂಬ ಬೇಸರ ಚಿತ್ರತಂಡದವರಲ್ಲಿ ಮೂಡಿದೆ.
‘ಜಂಟಲ್ ಮ್ಯಾನ್’ ನಲ್ಲಿರುವಂತ ಕಥೆ ಹಿಂದೆಂದೂ ಕೂಡ ನಾವೂ ನೋಡಿರುವುದಕ್ಕೆ ಸಾಧ್ಯವಿಲ್ಲ. ಅಂತದ್ದೊಂದು ಅಪರೂಪದ ಕಥೆ ಹೆಣೆದಿದ್ದಾರೆ. ಅಂತ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೂ ಕೂಡ ಈ ಸಿನಿಮಾದಿಂದ ಮನಸ್ಥೈರ್ಯ ಸಿಗುವ ಭರವಸೆ ಹೆಚ್ಚಾಗಿದೆ. ಕನ್ನಡದಲ್ಲೂ ಇನ್ನು ಉತ್ತಮ ಸಿನಿಮಾಗಳು ಬರಬೇಕು. ಆ ರೀತಿ ಬರಬೇಕೆಂದೆಲ್ಲಿ ಪ್ರೇಕ್ಷಕರ ಸಹಕಾರ ಅಷ್ಟೇ ಮುಖ್ಯವಾಗುತ್ತೆ. ಕನ್ನಡಿಗರೇ ಕನ್ನಡ ಸಿನಿಮಾಗಳನ್ನ ಉಳಿಸಲಿಲ್ಲ ಅಂದ್ರೆ ಹೇಗೆ? ನಿರ್ಮಾಪಕರಿಗೆ ಧೈರ್ಯ ಬರಬೇಕಾದಲ್ಲಿ ಚಿತ್ರಮಂದಿರಗಳು ತುಂಬಿರಬೇಕು. ‘ಜಂಟಲ್ ಮ್ಯಾನ್’ ಅದ್ಬುತ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ನೋಡದೆ ಇರುವವರು ಚಿತ್ರ ನೋಡಿ ಖಂಡಿತ ಇಷ್ಟವಾಗುತ್ತೆ.