– ಇಬ್ಬರಿಗೆ ಗಾಯ, ಮೆಕ್ಕೆಜೋಳ ಚೆಲ್ಲಾಪಿಲ್ಲಿ
ಹಾವೇರಿ: ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರಿಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಹನುಮನಮಟ್ಟಿ ಬಳಿ ನಡೆದಿದೆ.
ರಮೇಶ್(38) ಹಾಗೂ ರಮೇಶ್ ಲಮಾಣಿ (29) ಗಾಯಗೊಂಡ ವ್ಯಕ್ತಿಗಳು. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಕೂಡಲೇ ರಾಣೇಬೆನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಅತೀ ವೇಗವಾಗಿ ಚಾಲನೆ ಮಾಡಿದ್ದಾನೆ. ಈ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಹೊಡೆದಿದ್ದಾನೆ. ಪರಿಣಾಮ ಟ್ರ್ಯಾಕ್ಟರಿನಲ್ಲಿದ್ದ ಮೂರು ಲಕ್ಷದ ಮೌಲ್ಯದ ಮೆಕ್ಕೆಜೋಳ ಚೆಲ್ಲಾಪಿಲ್ಲಿಯಾಗಿವೆ.
ಅಪಘಾತ ನಡೆದ ನಂತರ ರೈತ ಕುಟುಂಬದ ಸದಸ್ಯರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಮೆಕ್ಕೆಜೋಳ ತುಂಬಿಕೊಂಡಿದ್ದಾರೆ. ಈ ಬಗ್ಗೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.