ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪ- ದೆಹಲಿಯ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಸ್ತಬ್ಧಚಿತ್ರ ಪ್ರದರ್ಶನ

Public TV
2 Min Read
ctd anubhava mantapa

ಚಿತ್ರದುರ್ಗ: ಇದುವರೆಗೂ ರಾಷ್ಟ್ರೀಯ ನಾಟಕೋತ್ಸವದ ಮೂಲಕ ಎಲ್ಲರ ಗಮನ ಸೆಳೆದಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ತರಳುಭಾಳು ಶಾಖಾ ಮಠದ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಇಂದು ದೆಹಲಿಯ ರಾಜಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಭಾಗಿಯಾಗಲಿದ್ದಾರೆ.

ಇಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಜಗತ್ತಿನ ಮೊದಲ ಸಂಸತ್ ಎನಿಸಿದ್ದ 12 ನೇಶತಮಾನದ ಅನುಭವ ಮಂಟಪ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳಲಿದ್ದು, ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿದ್ದ ಈ ಸ್ತಬ್ಧಚಿತ್ರದ ಪ್ರತಿರೂಪ ಇಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರದರ್ಶನಗೊಳ್ಳಲಿದೆ.

Anubhava Mantapa

ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 28 ಜನ ಕಲಾವಿದರು, ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಶಾಲೆಯಲ್ಲಿ ತರಬೇತಿ ಪಡೆದವರು ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ತಂಡದ ಮುಖ್ಯಸ್ಥರಾಗಿ ರಂಗಶಾಲೆಯ ಪ್ರಾಚಾರ್ಯ ಜಗದೀಶ್ ಆರ್ ನೇತೃತ್ವ ವಹಿಸಿದ್ದಾರೆ. ಸ್ತಬ್ಧಚಿತ್ರ ನಿರ್ಮಾಣ ಖ್ಯಾತ ಕಲಾವಿದರಾದ ಶಶಿದರ ಅಡಪ ಅವರದ್ದಾಗಿದ್ದು, ಈ ಸ್ತಬ್ಧ ಚಿತ್ರದ ಪ್ರಾಯೋಜಕತ್ವವನ್ನು ಕರ್ನಾಟಕ ಸರ್ಕಾರವಹಿಸಿಕೊಂಡಿದೆ.

ಕಳೆದ ಹನ್ನೊಂದು ವರ್ಷಗಳಿಂದ ರಾಜಪಥ್ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಭಾಗಿಯಾಗುತ್ತಿದ್ದು, ಈ ಬಾರಿ ಅನುಭವ ಮಂಟಪ ವಿಷಯ ವಸ್ತುವಿಗೆ ಕೇಂದ್ರ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿತ್ತು. 2020ರ ಗಣರಾಜೋತ್ಸವ ಹಿನ್ನೆಲೆ ಲಕ್ಕುಂಡಿ ದೇವಾಲಯ, ಹಾಲಕ್ಕಿ ಒಕ್ಕಲಿಗರು, ಮೆಕ್ಕಿಕಟ್ಟಿ, ಅನುಭವ ಮಂಟಪದ ವಿಷಯ ವಸ್ತುವನ್ನು ಆಯ್ಕೆ ಸಮಿತಿಗೆ ನೀಡಲಾಗಿತ್ತು. ಈ ಪೈಕಿ 12ನೇ ಶತಮಾನದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿ ಸೃಷ್ಟಿಸಿದ್ದ ಅನುಭವ ಮಂಟಪ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿತ್ತು.

Anubhava Mantapa B

ಪ್ರದರ್ಶನಗೊಳ್ಳುತ್ತಿರುವ ಅನುಭವ ಮಂಟಪ ಸ್ತಬ್ಧ ಚಿತ್ರ ಕಾಯಕವೇ ಕೈಲಾಸ, ದೇಹವೇ ದೇಗುಲ, ದಯವೇ ಧರ್ಮದ ಮೂಲವಯ್ಯ ಎನ್ನುವ ಮೂರು ಅಂಶಗಳನ್ನು ಒಳಗೊಂಡಿದೆ. ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಬಸವಣ್ಣನವರ ಪ್ರತಿಕೃತಿ ನಿರ್ಮಿಸಲಾಗಿದೆ. ಹಿಂಭಾಗದಲ್ಲಿ ಅನುಭವ ಮಂಟಪ, ಅದರೊಳಗೆ ಅಕ್ಕಮಹಾದೇವಿ, ಅಲ್ಲಮ ಪ್ರಭು ಸೇರಿ ಕೆಲವು ಪಾತ್ರಗಳನ್ನ ಕಲಾವಿದರು ಅಭಿನಯಿಸಲಿದ್ದಾರೆ.

ಕೆಳಭಾಗದಲ್ಲಿ ಅಕ್ಕನಾಗಮ್ಮ, ಶರಣೆ ಸತ್ಯಕ್ಕ, ಅಂಬಿಗರ ಚೌಡಯ್ಯ, ಮೊಳಿಗೆ ಮಾರಯ್ಯ, ಕಲ್ಯಾಣಮ್ಮ, ಹರಳಯ್ಯ, ಕುಂಬಾರ ಗುಂಡಣ್ಣ ಸಿದ್ಧಾರಾಮೇಶ್ವರ, ಬಾಚಿ ಕಾಯಕದ ಬಸಪ್ಪ ಅವರ ಪ್ರತಿಕೃತಿಗಳನ್ನು ಕಾಣಬಹುದು. ಕಲಾ ನಿರ್ದೇಶಕ ಶಶಿಧರ್ ಹಡಪದ ಅವರ ನೇತೃತ್ವದಲ್ಲಿ 20 ಮಂದಿ ವಿನ್ಯಾಸರು ಸುಮಾರು 45 ದಿನಗಳ ಕಾಲದಲ್ಲಿ ಈ ಸ್ತಬ್ಧ ಚಿತ್ರ ತಯಾರಿಸಿದ್ದಾರೆ. ರಾಜಪಥ್ ಪರೇಡ್‍ನಲ್ಲಿ ಕರ್ನಾಟಕವು ಈವರೆಗೂ ಒಮ್ಮೆ ಪ್ರಥಮ, ಎರಡು ಬಾರಿ ದ್ವಿತೀಯ ಹಾಗೂ ಎರಡು ತೃತೀಯ ಬಹುಮಾನ ಗೆದ್ದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *