ಕೊಡಗು: ಅನಧಿಕೃತವಾಗಿ ಹೆಬ್ಬಲಸಿನ ಮರಗಳನ್ನು ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದು, 3 ಲಕ್ಷ ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ವಿರಾಜಪೇಟೆ ತಾಲೂಕಿನ ಸಿ.ಎಸ್.ಸುಗುಣ, ಚೆನ್ನೈ ಕೋಟೆಯ ಪಿ.ಕೆ. ಮಜೀದ್ ಇಬ್ಬರನ್ನು ಬಂಧಿಸಿದ್ದು, ಲಾರಿ ಮಾಲೀಕ ರಫೀಕ್ ಹಾಗೂ ನಾಪೋಕ್ಲು ನಿವಾಸಿ ಹಂಸ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
ಮಡಿಕೇರಿಯಿಂದ ಸೋಮವಾರಪೇಟೆ ತಾಲೂಕಿಗೆ ಸಂಪರ್ಕ ಕಲ್ಪಿಸುವ ಐಗೂರು ಗ್ರಾಮದ ಕಾಜೂರು ರಸ್ತೆ ಲಾರಿ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಆರೋಪಿಗಳು ಲಾರಿಯಲ್ಲಿ ಹೆಬ್ಬಲಸಿನ ಮರಗಳನ್ನು ತುಂಬಿ ಅವುಗಳ ಮೇಲೆ ಸಿಲ್ವರ್ ಮರಗಳನ್ನು ತುಂಬಿ ಸೋಮವಾರಪೇಟೆ ಕಡೆಯಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.
ಮಜೀದ್ ಕೆಲ ದಿನಗಳ ಹಿಂದಷ್ಟೇ ಹೆಬ್ಬಲಸು ಮರಗಳನ್ನು ಸಾಗಿಸುತ್ತಿದ್ದಾಗ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ಕಾರ್ಯಚರಣೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಕ್ಷಮಾ, ಸತೀಶ್ ಕುಮಾರ್ ಅರಣ್ಯ ರಕ್ಷಕರಾದ ರಾಜಣ್ಣ, ಮೋಹನ್, ವಿಜಯ್ ಹಾಗೂ ವಾಹನ ಚಾಲಕ ನಂದೀಶ್ ಭಾಗವಹಿಸಿದ್ದರು.