ಮೈಸೂರು: ರಾಜ್ಯ ಹೆದ್ದಾರಿಗಳು ರಾಗಿ, ಭತ್ತ, ಹುರುಳಿಯ ಒಕ್ಕಣೆ ಮಾಡುವ ಸ್ಥಳಗಳಾಗಿ ಬಿಟ್ಟಿವೆ. ಪರಿಣಾಮ, ಈ ಬೆಳೆಗಳು ಬಸ್ಗಳ ಎಂಜಿನ್ ಗೆ ಸಿಲುಕಿ ಬಸ್ಗಳು ಕೆಟ್ಟು ನಿಲ್ಲುತ್ತಿವೆ.
ಈ ರೀತಿ ಬೆಳೆಗಳನ್ನು ರಸ್ತೆಗೆ ಹಾಕಿ ಒಕ್ಕಣೆ ಮಾಡುವುದರಿಂದ ದ್ವಿಚಕ್ರ ವಾಹನಗಳ ಅಪಘಾತಗಳು ಹೆಚ್ಚಾಗುತ್ತಿವೆ. ರಸ್ತೆಗಳಲ್ಲಿ ಒಕ್ಕಣೆ ಕಾರ್ಯ ಮಾಡಬಾರದು ಎಂಬ ನಿಯಮವಿದ್ದರೂ ರೈತರು ಇದಕ್ಕೆ ಕೇರ್ ಮಾಡುತ್ತಿಲ್ಲ.
ಭತ್ತ, ರಾಗಿ ಹಾಗೂ ಹುರುಳಿ ಬೆಳೆಗಳನ್ನು ರಸ್ತೆ ಮಧ್ಯದಲ್ಲೇ ಹಾಕಿ ಒಕ್ಕಣೆ ಮಾಡುತ್ತಿದ್ದಾರೆ. ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯಲ್ಲಿ ಹೀಗೆ ಒಕ್ಕಣೆಗೆ ಹಾಕಿದ್ದ ಹುರುಳಿ ಕೆಎಸ್ಆರ್ಟಿಸಿ ಬಸ್ ಇಂಜಿನ್ಗೆ ಸಿಕ್ಕಿಹಾಕಿಕೊಂಡಿದೆ. ಇದರಿಂದ ಚಾಲಕ, ನಿರ್ವಾಹಕ ಪಡಬಾರದ ಪಾಡು ಪಟ್ಟಿದ್ದಾರೆ.
ರಸ್ತೆಗಳಲ್ಲಿ ರೈತರು ಒಕ್ಕಣೆ ಮಾಡದಂತೆ ಕ್ರಮಕೈಗೊಳ್ಳುವಲ್ಲಿ ರಾಜ್ಯ ಹೆದ್ದಾರಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ರಸ್ತೆಯಲ್ಲಿನ ಒಕ್ಕಣೆಯಿಂದ ಸಾಕಷ್ಟು ಅಪಘಾತಗಳಾಗಿದ್ರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ದೊಡ್ಡ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.