ಬೆಂಗಳೂರು: ಇಂದು ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆ ನೆರವೇರಿದ್ದು, ಅದ್ದೂರಿ ಹುಡುಗ ಭರ್ಜರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಳಗ್ಗೆ 7.15ರಿಂದ 7.45ಕ್ಕೆ ಶುಭ ಮೂಹೂರ್ತದಲ್ಲಿ ಧ್ರುವ ಸರ್ಜಾ ಪ್ರೇರಣಾ ಅವರನ್ನು ವರಿಸಿದ್ದಾರೆ. ವೃಶ್ಚಿಕ ಲಗ್ನದಲ್ಲಿ ನವಜೋಡಿ ಸಪ್ತಪದಿ ತುಳಿದಿದ್ದಾರೆ. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಮಹೋತ್ಸವ ನೇರವೇರಿದ್ದು, ಗೌಡ ಸಂಪ್ರದಾಯದಂತೆ ಧ್ರುವ ಹಾಗೂ ಪ್ರೇರಣಾ ಸಪ್ತಪದಿ ತುಳಿದಿದ್ದಾರೆ.
ಇಂದು ಸಂಜೆ ಏಳು ಗಂಟೆಗೆ ರಿಸೆಪ್ಶನ್ ಇರಲಿದೆ. ನಾಳೆ ಅಭಿಮಾನಿಗಳಿಗಾಗಿ ಸರ್ಜಾ ಕುಟುಂಬ ವಿಶೇಷ ಔತಣ ಕೂಟ ಏರ್ಪಡಿಸಿದೆ. ಜೊತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಇರಲಿವೆ.
ಕಲ್ಯಾಣದ ಖುಷಿಯಲ್ಲಿ ಧ್ರುವ ಸರ್ಜಾ ಕುಟುಂಬ ಮನೆಯ ಮುಂದೆ ಇಡೀ ಬೀದಿಗೆ ಚಪ್ಪರ ಹಾಕಿ, ಬಾಳೆಕಂಬಗಳಿಂದ ‘ಅದ್ಧೂರಿ’ ಅಲಂಕಾರ ಮಾಡಿದ್ದರು. ವರಪೂಜೆ, ಚಪ್ಪರ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಸರ್ಜಾ ಕುಟುಂಬದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಧ್ರುವ ಸರ್ಜಾ ಮತ್ತು ಪ್ರೇರಣಾ ಮನೆಯಲ್ಲಿ ಶಾಸ್ತ್ರೋಕ್ತವಾದ ನಡೆದ ಕಾರ್ಯಕ್ರಮ ಗುರು-ಹಿರಿಯರ ಸಂಮ್ಮುಖದಲ್ಲಿ ನೆರವೇರಿತ್ತು.
ಶನಿವಾರ ನಡೆದ ಅರಿಶಿನ ಶಾಸ್ತ್ರದಲ್ಲಿ ಅರ್ಜುನ್ ಸರ್ಜಾ ಫ್ಯಾಮಿಲಿ, ನಟಿ ತಾರಾ ಅನುರಾಧ, ನಿರ್ದೇಶಕ ನಂದಕಿಶೋರ್, ನಿರ್ದೇಶಕ ಎ.ಪಿ ಅರ್ಜುನ್ ಭಾಗಿಯಾಗಿದ್ದರು. ಧ್ರುವ ಸರ್ಜಾಗೆ ಅರಿಶಿನವನ್ನು ಹಚ್ಚಿ ಸಂಭ್ರಮಿಸಿದ್ದರು. ಆ ಬಳಿಕ ಚಪ್ಪರಕ್ಕೆ ಧ್ರುವ ಪೂಜೆ ಸಲ್ಲಿಸಿದ್ದರು. ತಮ್ಮ ಕೈ ಮೇಲೆ ಹಾಕಿಕೊಂಡಿದ್ದ ಆಂಜನೇಯನ ಪ್ರತಿರೂಪವನ್ನು ಅಭಿಮಾನಿಗಳ ಮುಂದೆ ಪ್ರದರ್ಶಿಸಿದ್ದರು.
ಮೆಹಂದಿ ಶಾಸ್ತ್ರದಲ್ಲಿ ವಧು-ವರದ ಎರಡೂ ಕುಟುಂಬದವರು ಸೇರಿ ಹಾಡಿ ಕುಣಿದು ಸಖತ್ ಎಂಜಾಯ್ ಮಾಡಿದ್ದರು. ನೂರಾರು ಅಭಿಮಾನಿಗಳಿಗೆ ತಾವೇ ಖುದ್ದಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿರೋದು ವಿಶೇಷವಾಗಿತ್ತು.