ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲು ಕಾರಣರಾದ 17 ಅನರ್ಹ ಶಾಸಕರು ಇಂದು ಬೆಳಗ್ಗೆ 10 ಗಂಟೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಬಂದ ಕೂಡಲೇ ದೆಹಲಿಯಲ್ಲಿ ಬಿಎಲ್ ಸಂತೋಷ್ ನಿವಾಸದಲ್ಲಿ ಸಭೆ ನಡೆಸಿದರು. ಇತ್ತ ಬೆಂಗಳೂರಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದರು. ಸಭೆಯಲ್ಲಿ ಎಲ್ಲಾ ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯಿತು. ಆದರೆ ಚರ್ಚೆ ಅಪೂರ್ಣವಾಗಿ, ಪಟ್ಟಿಯನ್ನು ಇಂದು ಫೈನಲ್ ಮಾಡಲು ಬಿಜೆಪಿ ನಿರ್ಧರಿಸಿದೆ.
ಉಪಚುನಾವಣೆ ಎಲ್ಲಾ 15 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಸಭೆ ಬಳಿಕ ಮಾತನಾಡಿದ ಸಿಎಂ ಬಿಎಸ್ವೈ ಅವರು, ಅನರ್ಹ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಆ ಬಳಿಕ ಮಾತನಾಡಿದ ಅರವಿಂದ ಲಿಂಬಾವಳಿ, ನಮ್ಮ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಈಗ ಎಲ್ಲ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗುತ್ತಿದೆ. ಕೇಂದ್ರದ ಕಮಿಟಿಗೆ ಪಟ್ಟಿ ಕಳಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಬೆಂಳೂರಿಗೆ ಆಗಮಿಸಿದ ಅನರ್ಹ ಶಾಸಕರು ನೇರ ಸಿಎಂ ಬಿಎಸ್ವೈ ಅವರ ನಿವಾಸಕ್ಕೆ ತೆರಳಿ ಸಭೆ ನಡೆಸಿದರು. ಈ ವೇಳೆ ಉಪಚುನಾವಣೆ ಟಿಕೆಟ್ ಫೈನಲ್ ಮಾಡುವ ಮುನ್ನ ಅನರ್ಹ ಶಾಸಕರ ಅಭಿಪ್ರಾಯವನ್ನು ಸಿಎಂ ಪಡೆದರು. ಸಭೆಯಲ್ಲಿ ಅನರ್ಹ ಶಾಸಕರಾದ ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಪ್ರತಾಪ್ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ, ಆರ್.ಶಂಕರ್, ಮುನಿರತ್ನ, ಎಸ್ಟಿ ಸೋಮಶೇಖರ್, ಸುಧಾಕರ್, ಗೋಪಾಲಯ್ಯ, ನಾರಾಯಣಗೌಡ, ಮಹೇಶ್ ಕುಮಟ್ಟಳ್ಳಿ ಹಾಗೂ ಗೋವಿಂದ ಕಾರಜೋಳ, ಸಚಿವ ಕೆಎಸ್ ಈಶ್ವಪ್ಪ, ನಳೀನ್ ಕುಮಾರ್ ಕಟೀಲ್ ಮತ್ತು ಅರವಿಂದ ಲಿಂಬಾವಳಿ ಅವರು ಭಾಗಿಯಾಗಿದ್ದರು. ಸಭೆಯ ವೇಳೆ ಕೇವಲ ಪಕ್ಷದ ನಾಯಕರು ಹಾಗೂ ಅನರ್ಹ ಶಾಸಕರಿಗೆ ಮಾತ್ರ ಸಿಎಂ ನಿವಾಸಕ್ಕೆ ಪ್ರವೇಶ ಕಲ್ಪಿಸಲಿ, ಎಲ್ಲಾ ಕಾರ್ಯಕರ್ತರು, ಬೆಂಬಲಿಗರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಸಭೆಯ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ. ಆದರೆ ರೋಷನ್ ಬೇಗ್ ಅವರು ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಲಭಿಸಿಲ್ಲ ಎಂಬ ಮಾಹಿತಿ ಲಭಿಸಿದೆ.
ಸಭೆ ಬಳಿಕ ಮಾತನಾಡಿದ ಬೆಳಗ್ಗೆ 10 ಗಂಟೆಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಎಲ್ಲರೂ ಬಿಜೆಪಿಗೆ ಸೇರ್ಪಡೆ ಆಗುತ್ತೇವೆ. ಸೋಮವಾರ ಎಲ್ಲರೂ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಯಾವ ಯಾವ ಕ್ಷೇತ್ರದಲ್ಲಿ ಚುನಾವಣೆಯನ್ನ ಹೇಗೆ ಎದುರಿಸಬೇಕು ಎಂಬುವುದನ್ನು ಸಭೆಯಲ್ಲಿ ಚರ್ಚೆ ಮಾಡಿದ್ದು, ಪಕ್ಷದ ಬಂಡಾಯದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದರು. ಆ ಬಳಿಕ ಮಾತನಾಡಿದ ಬಿಸಿ ಪಾಟೀಲ್, ಬೆಳಗ್ಗೆ ಕಾಡು ಮಲ್ಲೇಶ್ವರಂ ದೇವಸ್ಥಾನದಲ್ಲಿ ಪೂಜೆ ಮಾಡಿ ಎಲ್ಲರೂ ಬಿಜೆಪಿ ಕಚೇರಿಗೆ ಸೇರ್ಪಡೆಯಾಗುತ್ತೇವೆ. ನಾವು ಕ್ಷೇತ್ರದಲ್ಲಿ ಮಾಡಿರೋ ಅಭಿವೃದ್ಧಿ ಕಾರ್ಯಗಳಿಂದ ನಮಗೆ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.