ಚಿಕ್ಕಮಗಳೂರು: ಆತ್ಮೀಯ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಮೇಕೆಯೊಂದು ಪಾಲ್ಗೊಂಡು ಸ್ಥಳೀಯರನ್ನು ನಿಬ್ಬೆರಗಾಗುವಂತೆ ಮಾಡಿದೆ.
ಜಿಲ್ಲೆಯ ಕೊಪ್ಪ ಪಟ್ಟಣದ ಕುವೆಂಪು ನಗರದ ಮೀನು ವ್ಯಾಪಾರಿ ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿದರು. ಹುಸೇನಬ್ಬ ತೀರಿಕೊಂಡ ಕ್ಷಣದಿಂದ ಅವರ ಮೃತದೇಹದ ಬಳಿಯೇ ಮೇಕೆ ಇಡೀ ರಾತ್ರಿ ಕುಳಿತಿತ್ತು. ಮರು ದಿನ ಮೃತದೇಹವನ್ನ ಸ್ಮಶಾನಕ್ಕೆ ಕರೆದೊಯ್ಯುವ ಮಾರ್ಗದಲ್ಲೂ ಜನಸಾಮಾನ್ಯರಂತೆ ಜೊತೆಯಲ್ಲೇ ಬಂದು ಅಚ್ಚರಿ ಮೂಡಿಸಿದೆ.
ಅಷ್ಟೆ ಅಲ್ಲದೇ ಹುಸೇನ್ರವರ ಅಂತ್ಯ ಸಂಸ್ಕಾರ ಮಾಡೋದನ್ನ ಇಣುಕಿ-ಇಣುಕಿ ನೋಡಿ, ಆತ್ಮೀಯ ಗೆಳೆಯನಿಗೆ ಕಂಬನಿ ಮಿಡಿದಿದೆ. ಅಷ್ಟಕ್ಕೂ ಈ ಮೇಕೆ ಹುಸೇನಬ್ಬ ಅವರದ್ದಲ್ಲ. ಅವರ ಪಕ್ಕದ ಮನೆಯವರು ಹರಕೆಗೆ ಬಿಟ್ಟಿದ್ದ ಮೇಕೆ. ದಿನದ ಹೆಚ್ಚಿನ ಸಮಯವನ್ನು ಹುಸೇನಬ್ಬ ಮೇಕೆ ಜೊತೆ ಕಳೆಯುತ್ತಿದ್ದರು. ಮೇಕೆ ಅವರ ಸಾವಿನ ಬಳಿಕವೂ ಅಂತಿಮ ವಿದಾಯದವರೆಗೂ ಜೊತೆಗಿದ್ದು ಸಂತಾಪ ಸೂಚಿಸಿದೆ. ಸತ್ತ ಮೇಲೂ ದ್ವೇಷ ಸಾಧಿಸೋ ಜನರ ಮಧ್ಯೆ ನಾಲ್ಕು ದಿನ ಪ್ರೀತಿಯನ್ನ ನೆನೆದು ಕಣ್ಣೀರಿಟ್ಟ ಮೇಕೆಯ ಮನುಷ್ಯತ್ವ ಮಾದರಿಯಾಗಿದೆ.