ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮೀಟರ್ ಬಡ್ಡಿ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇತ್ರಾವತಿ ಅಂಬಿಗ ಆತ್ಮಹತ್ಯೆ ಮಾಡಿಕೊಂಡ ಅಂಗನವಾಡಿ ಕಾರ್ಯಕರ್ತೆ. ಹೊನ್ನಾವರದ ಗ್ರಾ.ಪಂ ಸದಸ್ಯೆ ವಿಮಲಾ ನಾಯ್ಕ ಎಂಬುವರ ಬಳಿ ಮೀಟರ್ ಬಡ್ಡಿಗೆ ಒಂದು ಲಕ್ಷ ರೂ. ಸಾಲ ಪಡೆದಿದ್ದರು. ಮೀಟರ್ ಬಡ್ಡಿಯಾಗಿದ್ದರಿಂದ ನೇತ್ರಾವತಿ ಬಡ್ಡಿ ಹಣ ನೀಡುವುದರಲ್ಲೇ ಸುಸ್ತಾಗಿದ್ದು, ಅಸಲು ಪಾವತಿಸಿರಲಿಲ್ಲ. ಹೀಗಾಗಿ ಮೀಟರ್ ಬಡ್ಡಿಯ ಕಿರಿ ಕಿರಿ ತಾಳಲಾರದೇ ಅಂಗನವಾಡಿ ಕಾರ್ಯಕರ್ತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಡ್ಡಿ ಕೊಡುವುದು ತಡವಾಗಿದ್ದಕ್ಕೆ ಶುಕ್ರವಾರ ನೇತ್ರಾವತಿ ಕೆಲಸ ಮಾಡುತ್ತಿದ್ದ ಅಂಗನವಾಡಿಗೆ ವಿಮಲ ಆಗಮಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ನೇತ್ರಾವತಿಯವರ ಮೇಲೆ ಹಲ್ಲೆ ಮಾಡಿ ಹಣ ಕೊಡುವಂತೆ ಜೀವ ಬೆದರಿಕೆ ಹಾಕಿದ್ದರಿಂದ ಮನನೊಂದು ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇತ್ರಾವತಿ ಅವರ ಶವ ಇಂದು ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣರಾದ ವಿಮಲಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಹಣಕ್ಕಾಗಿ ಪೀಡಿಸುತಿದ್ದ ವಿಮಲಾ ನಾಯ್ಕಳನ್ನು ಬಂಧಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಂದ ಹೊನ್ನಾವರ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.